ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಿಸ್ವಾಸ್ ಮೇಲೆ ಹಲ್ಲೆ; 12 ಗಂಟೆ ಕಾಲ ತ್ರಿಪುರಾ ಬಂದ್ ಗೆ ಕರೆ
ಇದೊಂದು ಕೊಲೆ ಯತ್ನವಾಗಿದೆ. ನಾವು ಹಿಂಸೆಗೆ ಬೆಂಬಲ ನೀಡಲ್ಲ.
Team Udayavani, Jan 18, 2021, 4:17 PM IST
ಅಗರ್ತಲಾ(ತ್ರಿಪುರಾ): ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಪಿಜೂಷ್ ಕಾಂತಿ ಬಿಸ್ವಾಸ್ ವಾಹನದ ಮೇಲೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ಆರೋಪಿಸಿದ್ದು, ಇದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಜನವರಿ 19ರಂದು 12ಗಂಟೆಗಳ ಕಾಲ (ತ್ರಿಪುರಾ) ರಾಜ್ಯ ಬಂದ್ ಗೆ ಕರೆ ನೀಡಿದೆ.
ಭಾನುವಾರ ಸೆಪಾಯಿಜಲಾ ಜಿಲ್ಲೆಯ ಬಿಸಾಲ್ ಗಢ್ ಪ್ರದೇಶದಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಪಿಜೂಷ್ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ದೂರಿದೆ.
ಬಂದ್ ಗೆ ಎಲ್ಲಾ ವಿರೋಧ ಪಕ್ಷಗಳು ಕೂಡಾ ಬೆಂಬಲ ನೀಡಬೇಕೆಂದು ಕಾಂಗ್ರೆಸ್ ಮನವಿ ಮಾಡಿಕೊಂಡಿದ್ದು, ಇದೊಂದು ಕೊಲೆ ಯತ್ನವಾಗಿದೆ. ನಾವು ಹಿಂಸೆಗೆ ಬೆಂಬಲ ನೀಡಲ್ಲ. ಈ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲಿದ್ದು, ಜನರು ನಮ್ಮ ಬಂದ್ ಗೆ ಬೆಂಬಲ ನೀಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಹಲ್ಲೆ ಘಟನೆಯಲ್ಲಿ ಬಿಸ್ವಾಸ್ ಅವರ ತಲೆಗೆ ಗಾಯವಾಗಿದ್ದು, ಅವರಿಗೆ ಬಿಸಾಲ್ ಗಢ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಬಿಸಾಲ್ ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.