ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಯಡಿಯೂರಪ್ಪ ಕುಟುಂಬದ ಸರ್ಕಾರ: ಎಚ್ ಡಿಕೆ
Team Udayavani, Feb 15, 2021, 1:43 PM IST
ಶಿವಮೊಗ್ಗ: ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಬಜೆಟ್ ನ ಕಾರ್ಯಕ್ರಮಗಳನ್ನು ವಿಭಜಿಸಿ ಶಿವಮೊಗ್ಗದ ನಗರದ ಅಭಿವೃದ್ದಿಗೆ ನೀಡಲಾಗಿತ್ತು. ನಾನು ಶಿವಮೊಗ್ಗದ ಕೆಲ ಪ್ರದೇಶಗಳನ್ನ ನೋಡಿದ್ದೇನೆ. ಅವುಗಳ ಅಭಿವೃದ್ಧಿ ಆಗಿಲ್ಲ. ಎರಡು ವರ್ಷದ ಬಜೆಟ್ ಹಣ ಎಲ್ಲಿ ಹೋಯಿತು. ರಾಜ್ಯದ ಜನರು ಕಟ್ಟುವ ತೆರಿಗೆ ಹಣ ದುರ್ಬಳಿಕೆ ಆಗುತ್ತಿದೆ ಎಂದರು.
ರಾಜ್ಯದ ರಾಜಕಾರಣದಲ್ಲಿ ದೊಡ್ಡಮಟ್ಟದಲ್ಲಿ ಚರ್ಚಗೆ ಗ್ರಾಸವಾದ ವಿಷಯಗಳನ್ನ ಮಾತನಾಡಿಲ್ಲ. ಕಳೆದ ಒಂದು ವರ್ಷದಿಂದ ಕೋವಿಡ್ ಇದ್ದರಿಂದ ನಾನು ಯಾವ ವಿಷಯಗಳನ್ನ ಮಾತನಾಡಿಲ್ಲ. ರೈತರು ಬೆಳದಂತಹ ಬೆಳೆಗಳು ನಾಶವಾಗಿವೆ. ಭಗವಂತನ ದಯೆಯಿಂದ ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದೆ. ನಾನು ಜುಲೈ ಅಧಿಕಾರದಿಂದ ನಿರ್ಗಮಿಸಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಕಳೆದೊಂದು ವರ್ಷದಿಂದ ನಾನು ನಿಷ್ಕ್ರಿಯನಾಗಿದ್ದೇನೆ ಅದಕ್ಕೆ ಕಾರಣ ವೈದ್ಯರ ಸಲಹೆ. ನಾನು ಪಕ್ಷದ ಸಂಘಟನೆಗೆ ಚಾಲನೆ ನೀಡಲು ತೀರ್ಮಾನ ಮಾಡಿದ್ದೇನೆ ಎಂದರು.
ಇದನ್ನೂ ಓದಿ:ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆಸಿದ ಸಿಎಂ ಯಡಿಯೂರಪ್ಪ
ಮೈತ್ರಿ ಸರ್ಕಾರ ಪತನವಾದ ಬಳಿಕ ಬಂದ ಸರ್ಕಾರ ಎರಡು ವರ್ಷದಲ್ಲಿ ಮಾಡಿರುವ ಘೋಷಣೆಗಳು, ಜನಸಾಮಾನ್ಯರಿಗೆ ಹೇಗೆ ಸ್ಪಂದಿಸಿದ್ದಾರೆ ಎನ್ನುವುದನ್ನ ನೋಡಿದ್ದೇನೆ. 2018 ರಲ್ಲಿ ಮಳೆಯಿಂದಾಗಿ ಮನೆಗಳು ಬಿದ್ದಿದ್ದವು, ಮನೆ ಕಟ್ಟಲು 5 ಲಕ್ಷ ನೀಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಮೊನ್ನೆ ಸದನದಲ್ಲಿ ಸಚಿವರು ಸರ್ಕಾರದ ಹಣವನ್ನ ಪಡೆಯಲು ಫಲಾನುಭವಿಗಳು ಬೇಡ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದರು.
ಸರ್ಕಾರ ತೀರ್ಮಾನಿಸಬೇಕು: ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಮೀಸಲಾತಿಗೆ ಅವಕಾಶ ಇದೆ ಅಥವಾ ಇಲ್ಲವಾ ಎನ್ನುವ ವಾಸ್ತವಾಂಶಗಳನ್ನು ಜನರಿಗೆ ಸರ್ಕಾರ ಕೊಡುತ್ತಿಲ್ಲ. ಜಾತಿ- ಜಾತಿಗಳ ನಡುವೆ ಸಂಘರ್ಷ ಮಾಡುವುದಕ್ಕೆ ಸರ್ಕಾರ ಹೊರಟಿದೆಯ ಎಂಬ ಅನುಮಾನ ಮೂಡಿದೆ. ಮೀಸಲಾತಿ ದೊಡ್ಡ ಮಟ್ಟದಲ್ಲಿ ತೀರ್ಮಾನವಾಗಬೇಕೆಂಬುದು ನಮ್ಮ ಬಯಕೆ. ನಿಜವಾದ ಬಡವರ್ಗ ಹಾಗೂ ಸಮಾಜಕ್ಕೆ ನ್ಯಾಯಕೂಡುವ ನಿಟ್ಟಿನಲ್ಲಿ ಸರ್ಕಾರ ಮೀಸಲಾತಿ ತೀರ್ಮಾನ ಕೈಗೊಳ್ಳಬೇಕು ಎಂದು ಎಚ್ ಡಿಕೆ ಹೇಳಿದರು.
ಇನ್ನೊಬ್ಬರ ಟೀಕೆಯ ಬದಲು ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಯಾವ ಪಕ್ಷದ ಆಶ್ರಯವಿಲ್ಲದೆ ಅಧಿಕಾರ ಹಿಡಿಯಲು ಸಂಘಟನೆ ಮಾಡಲಾಗುತ್ತದೆ. ಜೆಡಿಎಸ್ ಪಕ್ಷಕ್ಕೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಅವಕಾಶವಿಲ್ಲಎಂದರು.
ಇದನ್ನೂ ಓದಿ: ಯತ್ನಾಳ್ ಮುಂದೆಯೂ ಹೀಗೆ ಮಾತನಾಡಿ ನೋಡಲಿ, ನಮ್ಮದು ಶಿಸ್ತಿನ ಪಕ್ಷ: ಶಾಸಕ ಶಿವರಾಜ್ ಪಾಟೀಲ್
ವಿಧಾನ ಪರಿಷತ್ ಸಭಾಪತಿ ಹಾಗೂ ಉಪಸಭಾಪತಿ ವಿಚಾರದಲ್ಲಿ ಬಿಜೆಪಿ ಪಕ್ಷ ನಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚೆ ಮಾಡಿದ್ದರು. ರಾಜ್ಯದಲ್ಲಿ ಕೃಷಿ ಕಾಯಿದೆ ವಿಚಾರದಲ್ಲಿ ಬದಲಾವಣೆ ತರಲು ನಾನು ಸಲಹೆ ನೀಡಿದೆ. ನಾನು ನೀಡಿದ ಸಲಹೆ ಮೇರೆಗೆ 79 ಎ ಹಾಗೂ 79 ಬಿ ಹಳೆಯ ಕಾಯ್ದೆಗಳನ್ನು ಮುಂದುವರಿಸಿದ್ದಾರೆ. ನಮ್ಮ ಪಕ್ಷದ ನಿಲುವು ರಾಜಕೀಯದ ಫಲ ಪಡೆಯುವುದಕ್ಕೆ ಅಲ್ಲ. ನಾವು ಜನಪರವಾಗಿ ತೀರ್ಮಾನ ಮಾಡ್ತೇವೆ ಎಂದ ಕುಮಾರಸ್ವಾಮಿ ಹೇಳಿದರು.