ಸೌಹಾರ್ದ, ಮಾನವೀಯ ಸಂಬಂಧಗಳ ಈದುಲ್ ಫಿತ್ರ
Team Udayavani, Apr 21, 2023, 6:57 AM IST
ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಮ್ಜಾನ್ ಇಸ್ಲಾಮೀ ಇತಿಹಾಸದ ಅನೇಕ ಮಹತ್ವಪೂರ್ಣ ಘಟನೆಗಳ ಅಪೂರ್ವ ಸಂಗಮವೂ ಆಗಿದೆ. ಈ ಪಾವನ ಮಾಸಕ್ಕೆ ವಿದಾಯ ಕೋರುವ ಈದುಲ್ ಫಿತ್ರ, ರಮ್ಜಾನ್ ಸಾರುವ ಉನ್ನತ ಆದರ್ಶಗಳ ಸವಿನೆನಪಿಗಾಗಿ ವಿಶ್ವಾದ್ಯಂತ ಆಚರಿಸಲ್ಪಡುತ್ತದೆ. ಉಪವಾಸ ವ್ರತವು ಸೃಷ್ಟಿಸುವ ಮಾನಸಿಕ ಶುಭ್ರತೆ ಮತ್ತು ಆತ್ಮಸಂಯಮವನ್ನು ಕೇವಲ ಅದೊಂದು ಮಾಸಕ್ಕೆ ಮಾತ್ರ ಸೀಮಿತಗೊಳಿಸದೆ ವರ್ಷದುದ್ದಕ್ಕೂ ಕಾಯ್ದುಕೊಳ್ಳಬೇಕೆಂಬ ಆದರ್ಶದೊಂದಿಗೆ ಈದುಲ್ ಫಿತ್ರ ಆಚರಿಸಲ್ಪಡುತ್ತದೆ.
ಸಮಗ್ರ ಮಾನವಕೋಟಿಯ ಕಲ್ಯಾಣಕ್ಕಾಗಿ ಪವಿತ್ರ ಖುರುಆನ್, ಪ್ರವಾದಿ ಮುಹಮ್ಮದ್ (ಸ.ಆ.)ರ ಮುಖಾಂತರ, ಜಗತ್ತಿಗೆ ಅವತೀರ್ಣ ಗೊಂಡದ್ದು ಪವಿತ್ರ ರಮ್ಜಾನ್ ಮಾಸದಲ್ಲಿ. ರಮ್ಜಾನ್ ಉಪವಾಸಾನುಷ್ಠಾನದಿಂದ ಪಂಚೇಂದ್ರಿಯಗಳ ಮೇಲೆ ಪೂರ್ಣ ಹತೋಟಿ ಸಾಧಿಸಲು ಸಾಧ್ಯವಾಗುತ್ತದೆ. ಒಂದು ಪೂರ್ಣ ಮಾಸ ಕಾಲ ಉಪವಾಸ ಆಚರಿಸಿದ ಮುಸ್ಲಿಮರೆಲ್ಲರಿಗೂ ಅನ್ನಾಹಾರ ಸೇವನೆಗೆ ಅನುಮತಿಸಲ್ಪಟ್ಟ ದಿನವೇ ಈದುಲ್ ಫಿತ್ರ ಸಂಭ್ರಮದ ಆಚರಣೆ.
ಈದುಲ್ ಫಿತ್ರನಂದು ಮಸೀದಿಗಳಲ್ಲಿ ಮಾರ್ದನಿಗೊಳ್ಳುವ “ಅಲ್ಲಾಹು ಅಕ್ಬರ್’, ಏಕತೆ, ಸಮಾನತೆ ಮತ್ತು ಸೌಹಾರ್ದದ ಅಮರ ಸಂದೇಶವನ್ನು ಮನುಕುಲಕ್ಕೆ ಸಾರುತ್ತದೆ. ಶ್ರೀಮಂತಿಕೆ, ಬಡತನಗಳೆರಡೂ ಶಾಶ್ವತವಲ್ಲವೆಂಬ ಸಾಮಾಜಿಕ ಪ್ರಜ್ಞೆಯ ಸಂದೇಶವು, ರಮ್ಜಾನ್ ವ್ರತಾನುಷ್ಠಾನದಲ್ಲಿದೆ. ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳಿಂದ ವೀಕ್ಷಿಸಿದರೂ ರಮ್ಜಾನಿನ ಪೂರ್ಣ ಮಾಸಕಾಲದ ಉಪವಾಸಾನುಷ್ಠಾನವು, ಮನುಷ್ಯನ ದೈಹಿಕ ಆರೋಗ್ಯವನ್ನು ವೃದ್ಧಿಸುವುದ ಲ್ಲದೆ, ಆತನಿಗೆ ಶಾಂತಿ, ಸಹನೆ, ಸಂಯಮ ಮತ್ತು ಆತ್ಮಸಂತೃಪ್ತಿಯನ್ನು ನೀಡುತ್ತದೆ.
ಹಸಿವು, ವಿಷಯಾಸಕ್ತಿ ಮತ್ತು ವಿಶ್ರಾಂತಿ ಎಂಬ ಮೂರು ಆಕಾಂಕ್ಷೆ ಮತ್ತು ಅನಿವಾರ್ಯಗಳನ್ನು ನಿಯಂತ್ರಣ ಕ್ಕೊಳಪಡಿಸಿ, ಆತ್ಮನಿಗ್ರಹ ಪಾಠವನ್ನು ರಮ್ಜಾನ್ ಉಪವಾಸಾನುಷ್ಠಾನ ಕಲಿಸುತ್ತದೆ.
ಸಹನೆಯ ಮಾಸ
ರಮ್ಜಾನ್ ಸಹನೆಯ ಮಾಸ. ಅದು ಬದುಕಿನಲ್ಲಿ ಅನುಕಂಪ ಮತ್ತು ಸಹಾನುಭೂತಿಯನ್ನು ಜಾಗೃತಗೊಳಿಸುತ್ತದೆ. ಪ್ರಾರ್ಥನೆ ಮತ್ತು ನಿವೇದನೆಯ ಮಾಸವೂ ಹೌದು. ತಿಳಿದೋ ತಿಳಿಯದೆಯೋ ಘಟಿಸಿದ ಅನೇಕ ಪಾಪಕೃತ್ಯಗಳಿಗೆ ಪಶ್ಚಾತ್ತಾಪ ಪಟ್ಟು, ಪರಮಕೃಪಾಳುವಾದ ಅಲ್ಲಾಹನಲ್ಲಿ ಕ್ಷಮೆ ಯಾಚಿಸುವ ಮಾಸವೂ ಹೌದು.
ಈದುಲ್ ಫಿತ್ರನಂತಹ ಹಬ್ಬಗಳ ಆಚರಣೆಗಳು, ನಮ್ಮ ನಮ್ಮನ್ನು ಪರಸ್ಪರ ಗೌರವಿಸಿಕೊಂಡ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿನಲ್ಲಿ ಮುನ್ನಡೆಯಲು ಪ್ರೇರಣೆ ನೀಡುತ್ತದೆ. ಈ ಸಂಭ್ರಮದಲ್ಲಿ ಇತರ ಧರ್ಮೀಯರೂ ಪಾಲ್ಗೊಂಡಾಗ ಹಬ್ಬದ ಮಹತ್ವ, ಪ್ರೀತಿ-ವಾತ್ಸಲ್ಯ, ಸೌಹಾರ್ದತೆ ಮತ್ತು ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಫಿತ್ರ ಪ್ರಾರ್ಥನೆಯ ಹಬ್ಬ
ಈದುಲ್ ಫಿತ್ರ ಪ್ರಾರ್ಥನೆಯ ಹಬ್ಬ. ಶಾಂತಿ, ಸಮಾನತೆ ಮತ್ತು ಸೌಹಾರ್ದವನ್ನು ದೈನಂದಿನ ಬದುಕಿನಲ್ಲಿ ರೂಢಿಸಿಕೊಂಡು ಮನುಕುಲದ ಶಾಂತಿ, ಸುಭಿಕ್ಷೆ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಏಕತೆಯಿಂದ ಈದುಲ್ ಫಿತ್ರನ ಈ ಶುಭದಿನದಂದು ನಾವೆಲ್ಲ ಪ್ರಾರ್ಥಿಸೋಣ. ಪ್ರೀತಿ-ವಿಶ್ವಾಸ, ಔದಾರ್ಯ, ಸಂಯಮ, ಕರುಣೆ, ಶಾಂತಿ-ಸೌಹಾರ್ದ ಭಾರತೀಯರಾದ ನಮ್ಮೆಲ್ಲ ರಲ್ಲೂ ಸದಾ ತುಂಬಿ ತುಳುಕುತಲಿರಲಿ ಎಂದು ಈ ಸುಸಂದರ್ಭದಲ್ಲಿ ಹಾರೈಸೋಣ.
ತ್ಯಾಗದ ಮಹತ್ವ ಬೋಧಿರುವ ಝಕಾತ್
“ಝಕಾತ್’ ಎಂಬುದು ಮುಸ್ಲಿಮರಿಗೆ ಬದುಕಿ ನಲ್ಲಿ ತ್ಯಾಗದ ಮಹತ್ವವನ್ನು ಬೋಧಿಸು ತ್ತದೆ. ಈದುಲ್ ಫಿತ್ರನಂದು “ಫಿತ್ರ ಝಕಾತ್’ ಎಂಬ ನಿರ್ಬಂಧ ದಾನವು ಬಡಬಗ್ಗರೂ ಹಬ್ಬದಲ್ಲಿ ಪಾಲ್ಗೊಂಡು ಸಂತೋಷಪಡಬೇಕೆಂಬ ಸದುದ್ದೇಶದಿಂದ ಕೂಡಿದೆ. “ನೀನು ಅಲ್ಲಾಹನ ಅನುಗ್ರಹದಿಂದ ಗಳಿಸಿರುವ ಸಂಪತ್ತಿನಲ್ಲಿ ದೀನ ದಲಿತರ, ಬಡಬಗ್ಗರ ಹಾಗೂ ಕಷ್ಟಕಾರ್ಪಣ್ಯ ಕ್ಕೊಳಗಾದವರ ಒಂದು ಪಾಲು ಸೇರಿಕೊಂಡಿದೆ ಎಂದೂ ನೀನು ಅರ್ಥ ಮಾಡಿಕೊಳ್ಳಲೇಬೇಕು’ ಎಂದು ಖುರುಆನ್ ಬೋಧಿಸಿದೆ. ಅಗತ್ಯ ಬಿದ್ದಾಗ ತನ್ನ ಹೆಚ್ಚಿನ ಸಂಪತ್ತನ್ನು ದೇವನ ಮಾರ್ಗದಲ್ಲಿ ಖರ್ಚು ಮಾಡಲು ಪ್ರೋತ್ಸಾಹ ನೀಡುತ್ತದೆ. “ಝಕಾತ್’ ಬದುಕಿನುದ್ದಕ್ಕೂ ಪರೋಪಕಾರ ಪ್ರಜ್ಞೆ, ಅನುಕಂಪ, ಸಮಾನತೆ ಮತ್ತು ಸೌಹಾರ್ದವನ್ನು ಪಾಲಿಸಲು ಪ್ರೇರಣೆ ನೀಡುತ್ತದೆ.
– ಕೆ.ಪಿ. ಅಬ್ದುಲ್ಖಾದರ್ ಕುತ್ತೆತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು