ರಾಮಮಂದಿರ ಕೆಡವಿ ಬಾಬ್ರಿ ಮಸೀದಿ ನಿರ್ಮಾಣ
Team Udayavani, Aug 23, 2019, 5:55 AM IST
ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಕೆಡವಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗಿದೆ. ಆದರೂ ಹಿಂದೂಗಳು ತಮ್ಮ ಹಕ್ಕನ್ನು ಬಿಟ್ಟುಕೊಡದೇ ಆ ಸ್ಥಳದಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂದು ಸುಪ್ರೀಂಕೋರ್ಟ್ನಲ್ಲಿ ಹಿಂದೂ ದಾವೆದಾರ ಗೋಪಾಲ್ ಸಿಂಗ್ ವಿಶಾರದ ಪರ ವಕೀಲರು ವಾದ ಮಂಡಿಸಿದ್ದಾರೆ. ಅಯೋಧ್ಯೆ ರಾಮಮಂದಿರದಲ್ಲಿ ಪ್ರಾರ್ಥನೆ ಹಕ್ಕು ಕೋರಿ 1950 ರಲ್ಲಿ ಗೋಪಾಲ್ ಸಿಂಗ್ ಅರ್ಜಿ ಸಲ್ಲಿಸಿದ್ದರು.
1986ರಲ್ಲಿ ಅವರು ಮೃತರಾದ ನಂತರ ಅವರ ಪುತ್ರ ರಾಜೇಂದ್ರ ಸಿಂಗ್ ಕೋರ್ಟ್ನಲ್ಲಿ ಅವರನ್ನು ಪ್ರತಿನಿಧಿಸುತ್ತಿದ್ದಾರೆ. 10ನೇ ದಿನ ವಿಚಾರಣೆ ನಡೆಸಿದ ಸಿಜೆಐ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠ ಗುರುವಾರ ವಿಶಾರದ ಪರ ವಾದವನ್ನು ಆಲಿಸಿತು.
ಈ ಸ್ಥಳವು ಪವಿತ್ರ ಸ್ಥಳವಾಗಿದ್ದು ನಾನು ರಾಮನ ಭಕ್ತನಾಗಿದ್ದು ನಮ್ಮ ಪ್ರಾರ್ಥನೆಯ ಹಕ್ಕು ನಾಗರಿಕ ಹಕ್ಕಾಗಿದೆ. ಹೀಗಾಗಿ ಇದನ್ನು ಕಸಿದುಕೊಳ್ಳಬಾರದು ಎಂದು ವಿಶಾರದ ಪರ ವಕೀಲ ರಂಜಿತ್ ಕುಮಾರ್ ವಾದಿಸಿದರು. 1950ರಲ್ಲಿ ಅಯೋಧ್ಯೆ ಮ್ಯಾಜಿಸ್ಟ್ರೇಟ್ ದೇಗುಲದ ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದರು. ಆಗ ಸುಮಾರು 20 ಜನರು ಪರವಾಗಿ ಹಾಗೂ ವಿರೋಧವಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ವಿಶಾರದ ಅರ್ಜಿ ಕೂಡ ಒಂದಾಗಿದೆ.