ಸಮಾಜಸೇವೆ ಹೆಸರಿನಲ್ಲಿ ಸ್ವಜಾತಿ ಮೆರೆಯುವುದು ಸರಿಯಲ್ಲ : ಉಪ್ಪಿ ವಿರುದ್ದ ನಟ ಚೇತನ್ ಟೀಕೆ
Team Udayavani, May 25, 2021, 3:29 PM IST
ಬೆಂಗಳೂರು : ಕೋವಿಡ್ ಸಂಕಷ್ಟದಲ್ಲಿ ಜನರಿಗೆ ನೆರವಾಗುತ್ತಿರುವ ನಟ ಉಪೇಂದ್ರ ಅವರ ಸಮಾಜ ಸೇವೆಯನ್ನು ಕನ್ನಡ ಚಿತ್ರರಂಗದ ಮತ್ತೋರ್ವ ನಟ ಚೇತನ್ ಕುಮಾರ್ ಟೀಕಿಸಿದ್ದಾರೆ.
ಕೋವಿಡ್ ಎರಡನೇ ಅಲೆ ಬಡ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆದಿದೆ. ಕೆಲಸ ಇಲ್ಲದೆ ಮನೆಯಲ್ಲಿ ಕುಳಿತ ಸಾವಿರಾರು ಕುಟುಂಬಗಳಿಗೆ ಉಪೇಂದ್ರ ಅವರು ತಮ್ಮ ಫೌಂಡೆಶನ್ ಮೂಲಕ ನೆರವಾಗುತ್ತಿದ್ದಾರೆ. ರೈತರಿಂದ ನೇರವಾಗಿ ತರಕಾರಿ ಖರೀದಿಸಿ, ಕಷ್ಟದಲ್ಲಿರುವ ಸಿನಿ ಕಾರ್ಮಿಕರು, ಆಟೋ ಚಾಲಕರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಅರ್ಚಕರು, ಪುರೋಹಿತರು ಹಾಗೂ ಅಡುಗೆ ಕೆಲಸ ಮಾಡುವ ಸುಮಾರು 200 ಕ್ಕೂ ಹೆಚ್ಚು ಬ್ರಾಹ್ಮಣರಿಗೆ ದಿನಸಿ ಕಿಟ್ ಮತ್ತು ತರಕಾರಿಗಳನ್ನು ನೀಡಿದ್ದು, ಅದನ್ನು ಉಪೇಂದ್ರ ಅವರ ಸಹೋದರ ಸುಧೀಂದ್ರ ವಿತರಿಸಿದರು. ಈ ಜನಪರ ಕಾರ್ಯವನ್ನು ಚೇತನ್ ಅವರು ಟೀಕಿಸಿದ್ದಾರೆ.
ತಮ್ಮ ಫೇಸ್ ಬುಕ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಚೇತನ್, ಸಮಾಜಸೇವೆಯ ಹೆಸರಿನಲ್ಲಿ ಸ್ವಜಾತಿ ಮೆರೆಯುವುದಕ್ಕಿಂತ ನಿಜವಾಗಿ ತುಳಿತಕ್ಕೆ ಒಳಗಾದವರಿಗೆ ಮತ್ತು ದುರ್ಬಲರಿಗೆ ಸಹಾಯ ಹಸ್ತ ಚಾಚುವುದೇ ನಿಜವಾದ ಸಮಾಜ ಸೇವೆ ಎಂದಿದ್ದಾರೆ.
ಇನ್ನು ಉಪೇಂದ್ರ ಅವರ ಪರೋಪಕಾರಿ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಕೆಲವರು ಟೀಕೆ ಕೂಡ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಉಪ್ಪಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಕೊಂಕು ನುಡಿದಿದ್ದಾರೆ. ಅಂತಹವರಿಗೆ ಉಪೇಂದ್ರ ಅವರು ಪ್ರತ್ಯುತ್ತರವನ್ನೂ ನೀಡಿದ್ದಾರೆ.