ನಿರ್ಮಾಪಕರೇ ಎಚ್ಚರದಿಂದಿರಿ!
Team Udayavani, Aug 8, 2018, 10:00 PM IST
ನಿರ್ಮಾಪಕರೇ ಎಚ್ಚರದಿಂದಿರಿ … ಇದು ನಿರ್ಮಾಪಕ ಸೂರಪ್ಪ ಬಾಬು ಹೇಳುತ್ತಿರುವ ಮಾತು. “ಕೋಟಿಗೊಬ್ಬ 3′ ಚಿತ್ರದ ಒಂದು ಹಂತದ ಚಿತ್ರೀಕರಣ ಮುಗಿಸಿರುವ ನಿರ್ಮಾಪಕ ಸೂರಪ್ಪ ಬಾಬು, ಇದೀಗ ಎರಡನೆಯ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆ, ಅವರು ತಮ್ಮ ನಿರ್ಮಾಪಕ ಮಿತ್ರರಿಗೆ, ಹುಷಾರಾಗಿರಿ ಎಂದು ಎಚ್ಚರಿಸಿದ್ದಾರೆ.
ಹೌದು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಕಾರ್ಯದರ್ಶಿಯೂ ಆಗಿರುವ ಬಾಬು, ನಿರ್ಮಾಪಕರಿಗೆ ಹುಷಾರಾಗಿರಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ, ಕರ್ನಾಟಕ ಸರ್ಕಾರವು 125 ಚಿತ್ರಗಳಿಗೆ ಸಬ್ಸಿಡಿ ಘೋಷಿಸಿದ್ದು, ಸದ್ಯದಲ್ಲೇ ಸಮಿತಿಯೊಂದು ಚಿತ್ರಗಳನ್ನು ನೋಡಲಿದೆ.
ಈ ಮಧ್ಯೆ ಕೆಲವರು, ಹಲವು ನಿರ್ಮಾಪಕರಿಗೆ ಫೋನ್ ಮಾಡಿ, 10 ಲಕ್ಷ ಸಬ್ಸಿಡಿ ಕೊಡಿಸುವುದಾಗಿಯೂ ಮತ್ತು ಹಾಗೆ ಸಬ್ಸಿಡಿ ಕೊಡಿಸುವುದಕ್ಕೆ ಒಂದಿಷ್ಟು ಲಂಚ ಕೇಳುತ್ತಿರುವ ವಿಷಯವೊಂದು ಬಾಬು ಕಿವಿಗೆ ಬಿದ್ದಿದೆ. ಹಾಗಾಗಿ ಬಾಬು ಸಂಘದ ಕಾರ್ಯದರ್ಶಿಯಾಗಿ, ಇತರೆ ನಿರ್ಮಾಪಕರಿಗೆ ಸಬ್ಸಿಡಿ ಕೊಡಿಸುತ್ತೇವೆಂದು ಲಂಚ ಕೇಳುತ್ತಿರುವ ಮಧ್ಯವರ್ತಿಗಳಿಂದ ಹುಷಾರಾಗಿರುವಂತೆ ಮನವಿ ಸಲ್ಲಿಸಿದ್ದಾರೆ.
ಈ ಹಿಂದಿನ ವರ್ಷಗಳಲ್ಲೂ, ಸಬ್ಸಿಡಿ ಕೊಡಿಸುವುದಾಗಿ ಅನೇಕ ನಿರ್ಮಾಪಕರನ್ನು ಮಧ್ಯವರ್ತಿಗಳು ಆಮಿಷ ಒಡ್ಡಿದ್ದ ದೂರುಗಳು ಕೇಳಿ ಬಂದಿದ್ದವು. ಈಗಲೂ ಅದು ಮುಂದುವರೆದಿರುವುದರಿಂದ, ಅಂತಹವರಿಂದ ದೂರವಿರಬೇಕು ಎಂದು ಬಾಬು ತಮ್ಮ ನಿರ್ಮಾಪಕ ಮಿತ್ರರಿಗೆ ಎಚ್ಚರಿಸಿದ್ದಾರೆ.