ಮೇ 25ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ನಿರ್ಧಾರ
Team Udayavani, May 7, 2020, 11:06 AM IST
ಕೊನೆಗೂ ಕಿರುತೆರೆ ಮಂದಿ ಮೊಗದಲ್ಲಿ ಮಂದಹಾಸ ಮೂಡಿದೆ. ಹೌದು, ಕಿರುತೆರೆಯ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು, ಮೇ.25ರಿಂದ ಧಾರಾವಾಹಿಗಳ ಚಿತ್ರೀಕರಣಕ್ಕೆ ಚಾಲನೆ ದೊರೆಯಲಿದೆ.
ಈ ಸಂಬಂಧ ಬುಧವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, “ಸರ್ಕಾರಕ್ಕೆ ಈ ಹಿಂದೆ ನಾವು ಕಿರುತೆರೆ ಚಿತ್ರೀಕರಣಕ್ಕೆ ಅನುಮತಿ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದೆವು. ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರು ಸ್ಪಂದಿಸಿದ್ದರು. ಕಿರುತೆರೆ ಕ್ಷೇತ್ರ ಚಿತ್ರೀಕರಣ ನಿರ್ಬಂಧನೆಗೆ ಒಳಗಾಗುವುದಿಲ್ಲ. ಮನೆಯೊಳಗೆ ಚಿತ್ರೀಕರಣ ಮಾಡುವುದರಿಂದ ಶೂಟಿಂಗ್ಗೆ ಅನುಮತಿ ನೀಡಲಾಗಿತ್ತು. ಔಟ್ ಡೋರ್ ಚಿತ್ರೀಕರಣ ಹಾಗು ರಿಯಾಲಿಟಿ ಶೋಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಧಾರಾವಾಹಿ ಚಿತ್ರೀಕರಣಕ್ಕೆ ಮಾತ್ರ ಅನುಮತಿ ದೊರೆತಿತ್ತು. ಈಗ ಮೇ.25 ರಿಂದ ಚಿತ್ರೀಕರಣಕ್ಕೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತಂತೆ ನಾವುಗಳು ಕೆಲವು ವಾಹಿನಿಗಳು, ನಿರ್ಮಾಪಕರು, ತಂತ್ರಜ್ಞರ ಜೊತೆ ಚರ್ಚಿಸಿದ್ದು, ಅಸೋಸಿಯೇಷನ್ನ ಕಾರ್ಯಕಾರಿ ಸಮಿತಿಯು, ಧಾರಾವಾಹಿಗಳ ಚಿತ್ರೀಕರಣವನ್ನು ಮೇ 25ರಿಂದ ಪುನರಾಂಭಿಸುವ ತೀರ್ಮಾನ ಮಾಡಿದೆ. ಕೋವಿಡ್ 19 ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೇ ಕೆಲಸ ಮಾಡುತ್ತೇವೆ. ಅದರಲ್ಲೂ ಕಡಿಮೆ ಜನರ ಜೊತೆ ಕೆಲಸ ಮಾಡಲುನಿರ್ಧರಿಸಲಾಗಿದೆ ‘ ಎಂದಿದ್ದಾರೆ.
ಇನ್ನು, ಕೋವಿಡ್ ದಿಂದ ಸಾಕಷ್ಟು ಸಮಸ್ಯೆಗಳಿದ್ದು, ಬಹುತೇಕ ಕಾರ್ಮಿಕರು, ತಂತ್ರಜ್ಞರು ಒಂದೆಡೆ ಇಲ್ಲದಿರುವ ಕಾರಣದಿಂದ ಮತ್ತು ಅವರ ಆರೋಗ್ಯದ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈಗಾಗಲೇ ಕೆಲವು ಚಾಲ್ತಿಯಲ್ಲಿದ್ದ ಧಾರಾವಾಹಿಗಳ ಚಿತ್ರೀಕರಣ ಲಾಕ್ಡೌನ್ನಿಂದ ಅರ್ಧದಲ್ಲೇ ನಿಂತಿದ್ದು, ಇಂದಿನ ಸ್ಥಿತಿಗೆ ಅನುಗುಣವಾಗಿ ಅಳವಡಿಸಿಕೊಂಡು ಚಿತ್ರೀಕರಣ ಮಾಡಲು ಸಾಕಷ್ಟು ಸಮಯಬೇಕಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.