ವರದಕ್ಷಿಣೆ ಕಿರುಕುಳ: ಕಿರುತೆರೆ ನಟನ ವಿಚಾರಣೆ
Team Udayavani, Feb 23, 2019, 5:19 AM IST
ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕಿರುತೆರೆ ನಟ ರಾಜೇಶ್ ಧ್ರುವ ಶುಕ್ರವಾರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದರು.
ಪೊಲೀಸರ ಸೂಚನೆ ಮೇರೆಗೆ ವಕೀಲರ ಜತೆ ಆಗಮಿಸಿದ ನಟನನ್ನು ಇನ್ಸ್ಪೆಕ್ಟರ್ ಸತ್ಯವತಿ ಅವರು ವಿಚಾರಣೆ ನಡೆಸಿದರು. ನಟ ರಾಜೇಶ್ ಧ್ರುವ, ಪತ್ನಿಯ ಮೇಲೇ ಆರೋಪಗಳನ್ನು ಮಾಡಿದ್ದಾರೆ. “ಆಕೆಯಿಂದಲೇ ನನ್ನ ತಾಯಿಗೆ ಸಮಸ್ಯೆಯಾಗಿದೆ. ನಾವು ಯಾವುದೇ ತಪ್ಪು ಮಾಡಿಲ್ಲ. ವಿನಾಕಾರಣ ಆರೋಪ ಮಾಡಿದ್ದಾಳೆ’ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ನಟ ರಾಜೇಶ್ ಧ್ರುವ ಪತ್ನಿಯ ಹೇಳಿಕೆ ದಾಖಲಿಸಿಕೊಳ್ಳಬೇಕಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಅವರು ಬಂದಿರಲಿಲ್ಲ. ಹೀಗಾಗಿ, ಫೆ.28ರಂದು ವಿಚಾರಣೆಗೆ ಹಾಜರಾಗುವಂತೆ ನಟನಿಗೆ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.