ಬಂಗಾರದ ಮನುಷ್ಯ ಡಾ. ರಾಜಕುಮಾರ್ ಅವರಿಗೆ ಅಪಮಾನ : ಕೆರಳಿದ ಕನ್ನಡಿಗರು
Team Udayavani, Jun 22, 2021, 12:53 PM IST
ಬೆಂಗಳೂರು: ಕನ್ನಡದ ಹೆಮ್ಮೆ, ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಅವರಿಗೆ ಅಪಮಾನ ಮಾಡುವಂತಹ ಕೃತ್ಯ ಜರುಗಿದೆ.
ತಮಿಳಿನ ವಿಕ್ರಮ್ ವೇದ ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಪಾತ್ರವರ್ಗದವರ ಲಿಸ್ಟ್ ನಲ್ಲಿ ಡಾ. ರಾಜ್ ಹೆಸರೂ ಇದೆ. ಆದರೆ ಈ ಫೋಟೋ ಕೆಳಗೆ ಡಾ.ರಾಜ್ ಹೆಸರು ಹಾಕಿ ಅವರ ಪಾತ್ರವನ್ನು ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ.
ಕನ್ನಡದ ಮೇರು ನಟನ ಬಗ್ಗೆ ಇಂತಹದ್ದೊಂದು ಪ್ರಮಾದವೆಸಗಿದ ಗೂಗಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಯಾಂಡಲವುಡ್ ನ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಈ ವಿಷಯವನ್ನು ತಮ್ಮ ಟ್ವಿಟರಿನಲ್ಲಿ ಪ್ರಸ್ತಾಪಿಸಿ, ಗೂಗಲ್ ಗೆ ರಿಪೋರ್ಟ್ ಮಾಡುವಂತೆ ಕರೆ ನೀಡಿದ್ದಾರೆ. ಅದರಂತೆ ಸಾಕಷ್ಟು ಜನರು ಗೂಗಲ್ ಗೆ ರಿಪೋರ್ಟ್ ಮಾಡುತ್ತಿದ್ದಾರೆ.
ಇದಕ್ಕೆಲ್ಲ ಕೊನೆಯಾವಾಗ ?
ಇನ್ನು ಇತ್ತೀಚಿಗೆ ಕನ್ನಡ ಕೊಳಕು ಭಾಷೆ ಎಂದು ಗೂಗಲ್ ನಲ್ಲಿ ಅಪಮಾನ ಮಾಡಲಾಗಿತ್ತು. ಇದರ ವಿರುದ್ಧ ಕನ್ನಡಿಗರು ಒಗ್ಗಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರ ಪ್ರತಿಭಟನೆಗೆ ಬೆದರಿದ ಗೂಗಲ್ ಕ್ಷಮೆ ಕೇಳಿತು, ಹಾಗೂ ಆ ಪೋಸ್ಟ್ ನ್ನು ಅಳಿಸಿ ಹಾಕಿತು. ಅದೇ ರೀತಿ ಕರ್ನಾಟಕದ ಧ್ವಜದ ಬಣ್ಣ ಹೋಲುವ ಒಳ ಉಡುಪುಗಳನ್ನು ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಇದೀಗ ಡಾ. ರಾಜಕುಮಾರ ಅವರಿಗೆ ಅಪಮಾನಿಸಲಾಗಿದೆ. ಇದು ಕನ್ನಡಿಗರನ್ನು ಕೆರಳಿಸಿದೆ.