Kannada cinema; ಕಡಲ ತೀರದ ಕಥಾನಕ ‘ಕುದ್ರು’
Team Udayavani, Oct 7, 2023, 5:38 PM IST
ಭಾಸ್ಕರ್ ನಾಯ್ಕ್ ಕಥೆ ಬರೆದು ನಿರ್ಮಿಸಿ, ನಿರ್ದೇಶಿಸಿರುವ “ಕುದ್ರು’ ಸಿನಿಮಾ ಇದೇ ಅಕ್ಟೋಬರ್ 13ರಂದು ಬಿಡುಗಡೆಯಾಗುತ್ತಿದೆ. ಸದ್ಯ “ಕುದ್ರು’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿತು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಕಂ ನಿರ್ದೇಶಕ ಭಾಸ್ಕರ್ ನಾಯ್ಕ, “ಇದೊಂದು ಅಪ್ಪಟ ಕರಾವಳಿ ಸೊಗಡಿನ ಸಿನಿಮಾ. “ಕುದ್ರು’ ಎಂದರೆ ನೀರಿನಿಂದ ಸುತ್ತುವರೆದ ದ್ವೀಪ ಎಂಬ ಅರ್ಥವಿದೆ. ಅಂಥದ್ದೇ ದ್ವೀಪವೊಂದರಲ್ಲಿ ನಡೆಯುವ ಜನ-ಜೀವನದ ಕಥೆ ಈ ಸಿನಿಮಾದಲ್ಲಿದೆ. ಈ ದ್ವೀಪದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮೂರು ಕಟುಂಬಗಳು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುತ್ತಾರೆ. ಆ ಸಮಯದಲ್ಲಿ ವಾಟ್ಸಪ್ ಸಂದೇಶವೊಂದರಿಂದ ಎಲ್ಲರಲ್ಲೂ ಮನಸ್ತಾಪ ಬರುತ್ತದೆ. ಸಿನಿಮಾದ ಮೊದಲ ಭಾಗದ ಕಥೆ ಕಾಲೇಜಿನಲ್ಲಿ ನಡೆಯುತ್ತದೆ. ಆನಂತರ ಕಥೆ ಬೇರೊಂದು ತಿರುವು ಪಡೆದುಕೊಂಡು ಸಾಗುತ್ತದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು
“ಕುದ್ರು’ ಸಿನಿಮಾದಲ್ಲಿ ಹರ್ಷಿತ್ ,ಪ್ರಿಯಾ ಹೆಗ್ಡೆ, ಡೈನಾ ಡಿಸೋಜ, ಗಾಡ್ವಿನ್, ಫರ್ಹಾನ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕುಂದಾಪುರ, ಉಡುಪಿ, ಗೋವಾ ಹಾಗೂ ಸೌದಿ ಅರೇಬಿಯಾ (ರಿಗ್)ದಲ್ಲಿ “ಕುದ್ರು’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ. “ಕುದ್ರು’ ಸಿನಿಮಾದ ಹಾಡುಗಳಿಗೆ ಪ್ರತೀಕ್ ಕುಂದು ಸಂಗೀತ ಸಂಯೋಜಿಸಿದ್ದು, ಶ್ರೀ ಪುರಾಣಿಕ್ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನವಿದೆ.