ಅವುಕು ರಾಜ್ಯದ ರಾಜನಾಗಿ “ಕಿಚ್ಚ ಸುದೀಪ’: Watch
Team Udayavani, Sep 2, 2018, 2:18 PM IST
45ನೇ ವರ್ಷಕ್ಕೆ ಕಾಲಿಟ್ಟ ಆರಡಿ ಕಟೌಟ್ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ “ಸೈರಾ ನರಸಿಂಹ ರೆಡ್ಡಿ’ ಚಿತ್ರತಂಡ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಕಿಚ್ಚನಿಗೆ ಗಿಫ್ಟ್ ನೀಡಿದೆ. ಸದ್ಯ ತೆಲುಗು ಮಾತ್ರವಲ್ಲದೇ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡುವಂತೆ ಮಾಡಿರುವ ಚಿತ್ರ “ಸೈರಾ ನರಸಿಂಹ ರೆಡ್ಡಿ’. ನರಸಿಂಹ ರೆಡ್ಡಿ ಪಾತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮಿಂಚಿದ್ದಾರೆ.
ಸ್ವಾತಂತ್ರ್ಯ ಹೋರಾಟದ ವೀರೋದ್ಧಾತ ಕಥೆ ಹೊಂದಿರೋ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಚಿತ್ರದಲ್ಲಿ ಅವುಕು ರಾಜ್ಯದ ರಾಜನಾಗಿ ನಟಿಸುತ್ತಿದ್ದಾರೆ. ಅಲ್ಲದೇ ಫಸ್ಟ್ ಲುಕ್ನಲ್ಲಿ ಸುದೀಪ್ ಕಪ್ಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಇತಿಹಾಸಕಾರರ ಪ್ರಕಾರ, 1846 ಜುಲೈ 23ರಂದು ಬ್ರಿಟಿಷರ ವಿರುದ್ಧ ನಡೆದ ಗಿಡ್ಡಲುರು ಬಂಡಾಯದಲ್ಲಿ ಉಯ್ಯಾಲುವಾಡ ನರಸಿಂಹರೆಡ್ಡಿ ಜತೆ ಅವುಕು ರಾಜ ಕೈ ಜೋಡಿಸುತ್ತಾನೆ.
ಈ ಕದನದಲ್ಲಿ ಸೆರೆಯಾದ ಉಯ್ಯಾಲು ನರಸಿಂಹರೆಡ್ಡಿಯನ್ನು 1846ರ ಅಕ್ಟೋಬರ್ 6ರಂದು ಮರಣದಂಡನೆಗೊಳಪಡಿಸುತ್ತಾರೆ. ಇದೇ ಕಥಾವಸ್ತುವನ್ನಿಟ್ಟುಕೊಂಡು ನಿರ್ದೇಶಕ ಸುರೇಂದರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ ಕೊನಿದೆಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ್ದು, ಅಮಿತ್ ತ್ರಿವೇದಿ ಸಂಗಿತ ಮತ್ತು ಎ.ಶ್ರೀಕಾಂತ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಇನ್ನು ಚಿರಂಜೀವಿ ಅವರ 151ನೇ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ನಯನತಾರಾ, ಜಗಪತಿ ಬಾಬು, ತಮ್ಮನ್ನಾ ಭಾಟಿಯಾ, ವಿಜಯ್ ಸೇತುಪತಿ, ಬ್ರಹ್ಮಾಜೀ ಸೇರಿದಂತೆ ಬಹು ದೊಡ್ಡತಾರಾಬಳಗವಿದೆ.