ಹುಬ್ಬಳ್ಳಿಯತ್ತ “ಕ್ರಾಂತಿಯೋಗಿ ಮಹಾದೇವರು’
Team Udayavani, Mar 9, 2018, 2:52 PM IST
ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ 101ನೇ ಸಿನಿಮಾ ಕ್ರಾಂತಿಕಾರಿ ಹಾಗೂ ಪವಾಡ ಪುರುಷ ಕುರಿತಾದ ಸಿನಿಮಾ “ಕ್ರಾಂತಿಯೋಗಿ ಮಹಾದೇವರು’ ಇದೀಗ ಹುಬ್ಬಳ್ಳಿ ಸುತ್ತ ಚಿತ್ರೀಕರಣ ಮಾಡಲು ಸಜ್ಜಾಗಿದೆ. ಕಳೆದ 12 ದಿವಸಗಳ ಕಾಲ ಬೆಂಗಳೂರಿನ ರಾಕ್ಲೈನ್ ಸ್ಟುಡಿಯೋ ಹಾಗೂ ಎಂ.ಡಿ ಕೌಶಿಕ್ ಅವರ ಪುಟ್ಟಣ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ಮುಗಿಸಿ ಉಳಿದ ಭಾಗದ ಚಿತ್ರೀಕರಣ ಹುಬ್ಬಳ್ಳಿ ಸುತ್ತಲೂ ನಡೆಸಲಿದೆ ಚಿತ್ರತಂಡ.
ನಟ ರಾಮ್ ಕುಮಾರ್ ಕಥಾ ನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಮಹಾನ್ ವ್ಯಕ್ತಿ ಹಾಗೂ ಶಕ್ತಿ ಮಹಾದೇವರು ಸ್ವತಂತ್ರಪೂರ್ವ ಕಾಲದವರು. 1910 ರಿಂದ 1980 ವರೆಗೆ ಅವರ ಸಾಧನೆಯಲ್ಲಿ ಏಕೀಕರಣ, ತತ್ವಗಳ ಅನುಸರಣೆ, ಗಿರಿ ಮಲ್ಲೇಶ್ವರನ ಮೇಲಿನ ಭಕ್ತಿ, ಅಂತಜಾತೀಯ ವಿವಾಹ, ಸ್ವತಂತ್ರ ಹೋರಾಟ, 35 ಬಾರಿ ಜೈಲಿಗೆ ಹೋಗಿ ಬಂದದ್ದು ಈ ಚಿತ್ರದಲ್ಲಿ ಅಡಕವಾಗಲಿದೆ.
ಶಿವಕುಮಾರ್ ತಂದೆಯ ಪಾತ್ರದಲ್ಲಿ, ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಗಣೇಶ್ ರಾವ್, ರಮೇಶ್ ಭಟ್, ಸುಚಿತ್ರಾ, ಸಿಹಿಕಹಿ ಚಂದ್ರು, ರವಿ ಚೇತನ್, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಇನ್ನಿತರ ಕಲಾವಿದರು ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.
ಮಾಧವನಂದ ಶೇಗುಣಸಿ ಕಥೆ, ಸಂಭಾಷಣೆ, ರಾಜ ರವಿಶಂಕರ್ ಸಹ ನಿರ್ದೇಶನ, ಜೆ ಜಿ ಕೃಷ್ಣ ಛಾಯಾಗ್ರಹಣ, ಬಿ ಬಲರಾಮ್ ಸಂಗೀತ, ಕೆ ಈಶ್ವರ್ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ. ಮಹಾದೇವರ ಪರಮ ಭಕ್ತ ಶ್ರೀ ಶೈಲಗಾಣಿಗೇರ (ರಬಕವಿ) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.