‘ಮಾರಕಾಸ್ತ್ರ’ದೊಂದಿಗೆ ಬಂದ ಹೊಸಬರು
Team Udayavani, Feb 26, 2022, 3:00 PM IST
”ಮಾರಕಾಸ್ತ್ರ”- ಹೀಗೊಂದು ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದೆ. ಕೋಮಲ ನಟರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗುರುಮೂರ್ತಿ ಸುನಾಮಿ, “ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ ಮಾರಕಾಸ್ತ್ರ ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ ದೇಶದ ರಕ್ಷಣೆಗಾಗಿ ಎಂಬ ಅಡಿಬರಹವಿದೆ. ನಾನು ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ’ ಎಂದರು.
ಚಿತ್ರಕ್ಕೆ ಮಿರಾಕಲ್ ಮಂಜು ಸಂಗೀತವಿದೆ. “ನಮ್ಮ ಚಿತ್ರದಲ್ಲಿ ಆರು ಹಾಡುಗಳಿವೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಮೂರು ಹಾಡುಗಳನ್ನು ನಮ್ಮ ಚಿತ್ರದ ನಿರ್ಮಾಪಕರಾದ ನಟರಾಜ್ ಹಾಡಿದ್ದಾರೆ’ ಎಂದು ಹಾಡುಗಳ ಕುರಿತು ವಿವರಣೆ ನೀಡಿದರು.
ಇದನ್ನೂ ಓದಿ:ನಟ ಚೇತನ್ ಬಂಧನ ಖಂಡಿಸಿ ನಿರಶನ
“ನಿರ್ದೇಶಕರು ನನಗೆ ಕಥೆ ಹೇಳಿದಾಗ ಈ ಚಿತ್ರದಲ್ಲಿ ನಟಿಸಬೇಕೆಂದು ಆಸೆಯಾಯಿತು. ನಾನು ಹಿಂದೆ ಛಾಯಾ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದು ಎರಡನೇ ಚಿತ್ರ. ಈ ಸಂದರ್ಭದಲ್ಲಿ ನಾನು ಅಪ್ಪು ಅವರನ್ನು ನೆನಪಿಸಿಕೊಳ್ಳುತ್ತೇನೆ. ಎಲ್ಲರು ನನಗೆ ಅವರ ರೀತಿ ಕಾಣುವೆ. ಅವರನ್ನೇ ಅನುಕರಣೆ ಮಾಡುತ್ತೀಯಾ ಎನ್ನುತ್ತಾರೆ’ ಎಂದರು ನಾಯಕ ಆನಂದ್ ಆರ್ಯ. ಮಾಧುರ್ಯ ಈ ಚಿತ್ರದ ನಾಯಕಿ.
ನಾನು ತುಮಕೂರು ಜಿಲ್ಲೆಯ ಕೊರಟಗೆರೆಯವನು. ಇದು ನನಗೆ ಮೊದಲ ಸಿನಿಮಾ ಕಾರ್ಯಕ್ರಮ. ನಿರ್ದೇಶಕರು ಹೇಳಿದ ಈ ಕಥೆಯಲ್ಲಿ ನಮ್ಮ ದೇಶ ರಕ್ಷಣೆಯ ಹಲವು ಅಂಶಗಳಿದೆ. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ಸಿಕ್ಕಿಂ, ಡಾರ್ಜಿಲಿಂಗ್ ಮುಂತಾದ ಕಡೆ ಹೆಚ್ಚಿನ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಆರು ಹಾಡುಗಳ ಪೈಕಿ ಮೂರು ಹಾಡುಗಳನ್ನು ನಾನೇ ಹಾಡಿದ್ದೀನಿ. ಅವಕಾಶ ಕೊಟ್ಟ ಸಂಗೀತ ನಿರ್ದೇಶಕರಿಗೆ ಧನ್ಯವಾದ ಎಂದರು ನಿರ್ಮಾಪಕ ನಟರಾಜ್. ಚಿತ್ರದಲ್ಲಿ ನಟಿಸುತ್ತಿರುವ ಶಿವಪ್ರಸಾದ್ ಹಾಗೂ ಪುರುಷೋತ್ತಮ ತಮ್ಮ ಅನುಭವ ಹಂಚಿಕೊಂಡರು.