ಚಂದನವನದ ಛಲದಂಕ ಮಲ್ಲೆ ಪಾರ್ವತಮ್ಮ ಚಿರಸ್ಥಾಯಿ
Team Udayavani, Jun 1, 2017, 3:50 AM IST
ಬೆಂಗಳೂರು: ವರನಟ ಡಾ| ರಾಜ್ಕುಮಾರ್ ಅವರ ಪತ್ನಿ ಹಾಗೂ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ಕುಮಾರ್ (78) ಬುಧವಾರ ನಿಧನ ಹೊಂದಿದರು. ಬಹು ಅಂಗಾಂಗ ವೈಫಲ್ಯದಿಂದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ 16 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪಾರ್ವತಮ್ಮ ಮುಂಜಾನೆ 4.30 ರಲ್ಲಿ ಕೊನೆಯುಸಿರೆಳೆದರು. ಡಾ| ರಾಜ್ಕುಮಾರ್ ಆಶಯದಂತೆ ಪಾರ್ವತಮ್ಮ ಅವರು ಸಾವಿನ ಅನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪಾರ್ವತಮ್ಮ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಚಿತ್ರೋದ್ಯಮ ಚಟುವಟಿಕೆಗಳನ್ನು ಬಂದ್ಗೊಳಿಸಿ ಗೌರವ ಸಲ್ಲಿಸಿದರು. ಸಂಜೆ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ| ರಾಜ್ಕುಮಾರ್ ಸಮಾಧಿಗೆ ಕೊಂಡೊಯ್ಯಲಾಯಿತು. ಡಾ| ರಾಜ್ ಸಮಾಧಿ ಪಕ್ಕದಲ್ಲೇ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಡಾ| ರಾಜ್ ಕುಟುಂಬದ ಪ್ರೇರಕ ಶಕ್ತಿಯಾಗಿದ್ದ, ಕನ್ನಡ ಚಿತ್ರೋದ್ಯಮದ ಪಾಲಿಗೆ ಪ್ರೀತಿಯ ‘ಅಮ್ಮ’ನಾಗಿದ್ದ ಪಾರ್ವತಮ್ಮ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಅನಂತ್ಕುಮಾರ್, ಡಿ.ವಿ. ಸದಾನಂದ ಗೌಡ ಸಹಿತ ರಾಜಕೀಯ, ಸಿನಿಮಾ, ಸಾಹಿತ್ಯ ಕ್ಷೇತ್ರದ ಗಣ್ಯರು ಸದಾಶಿವನಗರದ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಡಾ| ರಾಜ್ಕುಮಾರ್ ಅಭಿಮಾನಿಗಳು, ಸಾರ್ವಜನಿಕರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಿದರು. ಕಂಠೀರವ ಸ್ಟುಡಿಯೋ ಬಳಿಯೂ ಸಾವಿರಾರು ಅಭಿಮಾನಿಗಳು, ಚಿತ್ರರಂಗದ ಗಣ್ಯರು ಪಾರ್ವತಮ್ಮ ಅವರ ಪಾರ್ಥಿವ ಶರೀರದ
ಅಂತಿಮ ದರ್ಶನ ಪಡೆದರು. ಸಾರ್ವಜನಿಕ ದರ್ಶನದ ಅನಂತರ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ| ರಾಜ್ಕುಮಾರ್ ಸಮಾಧಿ ಪಕ್ಕದಲ್ಲೇ ಸಕಲ ಸರಕಾರಿ ಗೌರವಗಳೊಂದಿಗೆ ಪಾರ್ವತಮ್ಮ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸರಕಾರದ ಪರವಾಗಿ ಸಚಿವರಾದ ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್ ಸಹಿತ ಮೇಯರ್ ಪದ್ಮಾವತಿ, ಎಲ್ಲ ಪಕ್ಷಗಳ ಶಾಸಕರು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು. ಕಿರಿಯ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ವಿಧಿ – ವಿಧಾನ ನೆರವೇರಿಸಿದರು. ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರರಾಜ್ಕುಮಾರ್, ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮೀ ಸಹಿತ ಕುಟುಂಬ ಸದಸ್ಯರು, ಚಿತ್ರೋದ್ಯಮ ಗಣ್ಯರು, ಅಪಾರ ಪ್ರಮಾಣದ ಅಭಿಮಾನಿಗಳು ಉಪಸ್ಥಿತರಿದ್ದರು.