Kannada Cinema; ಮಾತಿನ ಮನೆಯಲ್ಲಿ ನಿಂತ ‘ದೇಸಾಯಿ’: ಪ್ರವೀಣ್ ಕುಮಾರ್ ಹೊಸ ಸಿನಿಮಾ
Team Udayavani, Dec 28, 2023, 3:09 PM IST
ಶಶಾಂಕ್ ನಿರ್ದೇಶನದ “ಲವ್ 360′ ಸಿನಿಮಾದ ಮೂಲಕ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗಿರುವ ನಟ ಪ್ರವೀಣ್ ಕುಮಾರ್ ಈಗ “ದೇಸಾಯಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಪ್ರವೀಣ್ ಕುಮಾರ್ ಅಭಿನಯದ ಎರಡನೇ ಸಿನಿಮಾ “ದೇಸಾಯಿ’ಯ ಮಾತಿನ ಭಾಗದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ದೊರೆತಿದೆ.
“ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್’ ಲಾಂಛನದಲ್ಲಿ ಮಹಾಂತೇಶ ವಿ. ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ “ದೇಸಾಯಿ’ ಸಿನಿಮಾಕ್ಕೆ ನಾಗಿರೆಡ್ಡಿ ಭಡ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಿರೆಡ್ಡಿ ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕರಾಗುತ್ತಿದ್ದಾರೆ. “ದೇಸಾಯಿ’ ಕೌಟುಂಬಿಕ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು, ಸಿನಿಮಾದ ಕಥೆ ಉತ್ತರ ಕರ್ನಾಟಕದಲ್ಲಿ ನಡೆಯುತ್ತದೆ. ಹಾಗಾಗಿ “ದೇಸಾಯಿ’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಬಾದಾಮಿ, ಬಾಗಲಕೋಟೆ ಮುಂತಾದ ಕಡೆಗಳಲ್ಲಿ ನಡೆಸಲಾಗಿದೆ.
ಇನ್ನು “ದೇಸಾಯಿ’ ಸಿನಿಮಾದಲ್ಲಿ ಪ್ರವೀಣ್ ಕುಮಾರ್ ಅವರಿಗೆ ರಾಧ್ಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ(ಕಾಂತಾರ) ಮುಂತಾದವರು ಸಿನಿಮಾದ ಇತರ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸದ್ಯ “ದೇಸಾಯಿ’ ಸಿನಿಮಾದ ಮಾತಿನ ಜೋಡಣೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಬಾಕಿಯಿರುವ ಎರಡು ಹಾಡುಗಳ ಚಿತ್ರೀಕರಣವನ್ನು ಜನವರಿ ವೇಳೆಗೆ ಮುಗಿಸುವ ಯೋಚನೆಯಲ್ಲಿದೆ ಚಿತ್ರತಂಡ.