ರಿಷಭ್ ಪಂತ್ ಸೇರಿ ಹಲವರಿಗೆ ಕೋಟ್ಯಂತರ ರೂ ವಂಚಿಸಿದ್ದ ಮಾಜಿ ಕ್ರಿಕೆಟಿಗನ ಬಂಧನ
Team Udayavani, Dec 28, 2023, 2:59 PM IST
ಹೊಸದಿಲ್ಲಿ: 25 ವರ್ಷದ ಮಾಜಿ ಕ್ರಿಕೆಟಿಗನನ್ನು ದೆಹಲಿ ಪೊಲೀಸರು ಡಿಸೆಂಬರ್ 25 ರಂದು ತಾಜ್ ಪ್ಯಾಲೇಸ್ ಸೇರಿದಂತೆ ಐಷಾರಾಮಿ ಹೋಟೆಲ್ ಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ. ಆರೋಪಿಯನ್ನು ಮೃಣಾಂಕ್ ಸಿಂಗ್ ಎಂದು ಗುರುತಿಸಲಾಗಿದ್ದು, 2022 ಜುಲೈರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಗೆ 5.5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ.
ಅಲ್ಲದೆ, ಮೃಣಾಂಕ್ ಸಿಂಗ್ 2020 ಮತ್ತು 2021 ರ ನಡುವೆ ಕ್ರಿಕೆಟಿಗ ರಿಷಭ್ ಪಂತ್ ಅವರಿಗೆ 1.63 ಕೋಟಿ ರೂ ವಂಚಿಸಿದ್ದಾರೆ.
ಮೃಣಾಂಕ್ ಸಿಂಗ್ ಹರಿಯಾಣ ಅಂಡರ್-19 ತಂಡದಲ್ಲಿ ಆಡಿದ್ದಾರೆ ಮತ್ತು ಇಂಡಿಯಾ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಎಂದು ಹೇಳಿಕೊಂಡು ಐಷಾರಾಮಿ ಹೋಟೆಲ್ ಗಳಿಗೆ ವಂಚಿಸುತ್ತಿದ್ದ.
ಅವರು 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್ಗಾಗಿ ಆಡಿದ ಐಪಿಎಲ್ ಕ್ರಿಕೆಟಿಗನಂತೆ ಪೋಸ್ ನೀಡುತ್ತಿದ್ದರು. ತಾನು ಸೆಲೆಬ್ರೆಟಿ ಎಂದು ಬಿಂಬಿಸಿಕೊಂಡು ಯುವತಿಯರ ಮೇಲೆ ಪ್ರಭಾವ ಬೀರಲು, ದುಬಾರಿ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಲು ಮತ್ತು ಬಿಲ್ ಗಳನ್ನು ಪಾವತಿಸದೆ ಪಂಚತಾರಾ ಹೋಟೆಲ್ಗಳಲ್ಲಿ ಉಳಿಯುತ್ತಿದ್ದ.
2022ರಲ್ಲಿ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ಒಂದು ವಾರ ತಂಗಿದ್ದ. ₹5.53 ಲಕ್ಷ ಬಿಲ್ ಹಣವನ್ನು ಅಡಿಡಾಸ್ ಕಂಪನಿ ಪಾವತಿಸುವುದಾಗಿ ಸಿಬ್ಬಂದಿಗೆ ತಿಳಿಸಿದ್ದ. ಹೋಟೆಲ್ ಸಿಬ್ಬಂದಿ ಆತನನ್ನು ನಂಬಿ ಬ್ಯಾಂಕ್ ವಿವರಗಳನ್ನು ಹಂಚಿಕೊಂಡಿದ್ದರು. ನಕಲಿ ಐಡಿ ನೀಡಿದ್ದ. ಬಾಕಿ ಪಾವತಿಸಲು ಹೋಟೆಲ್ ಹಲವಾರು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಇವನು ಫೋನ್ ಸ್ವಿಚ್ ಆಫ್ ಮಾಡಿ ಕಣ್ಮರೆಯಾಗಿದ್ದ. ಹೋಟೆಲ್ನವರು ಪೊಲೀಸ್ ದೂರು ನೀಡಿದ್ದರು.
ಪೊಲೀಸರು ತನ್ನ ಹಿಂದೆ ಬಿದ್ದಿರುವುದು ಗೊತ್ತಾಗಿ ತನ್ನ ಫೋನ್ ಅನ್ನು ಆಫ್ ಮಾಡಿದ್ದ. ತಾನು ದುಬೈನಲ್ಲಿ ನೆಲೆಸಿದ್ದೇನೆ ಎಂದು ಪರಿಚಯಸ್ಥರನ್ನು ನಂಬಿಸಿದ್ದ. ಈತನ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಘಟನೆ ನಡೆದ ಸುಮಾರು ಒಂದು ವರ್ಷದ ನಂತರ ಡಿಸೆಂಬರ್ 25ರಂದು ಹಾಂಗ್ ಕಾಂಗ್ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಈತನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಪಂತ್ ಗೂ ವಂಚನೆ: ಮೃಣಾಂಕ್ ಸಿಂಗ್ ವಂಚಿಸಿದವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಾಯಕ ರಿಷಭ್ ಪಂತ್ ಕೂಡ ಇದ್ದರು. 2022 ರಲ್ಲಿ, ಮೃಣಾಂಕ್ ತಾನು ಐಷಾರಾಮಿ ವಸ್ತುಗಳ ವ್ಯವಹಾರದಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದ್ದು, ಅತ್ಯಂತ ಸಮಂಜಸವಾದ ವೆಚ್ಚದಲ್ಲಿ ಖರೀದಿಸಬಹುದು ಎಂದು ಪಂತ್ ಗೆ ಹೇಳಿದ್ದ. ನಂಬಿದ್ದ ಪಂತ್ ದುಬಾರಿ ವಾಚ್ಗಳನ್ನು ಖರೀದಿಸಲು ಮೃಣಾಂಕ್ಗೆ ಗಣನೀಯ ಪ್ರಮಾಣದ ಹಣವನ್ನು ವರ್ಗಾಯಿಸಿದ್ದರು. ಆಭರಣಗಳು ಸೇರಿದಂತೆ ಕೆಲವು ಐಷಾರಾಮಿ ವಸ್ತುಗಳನ್ನು ನೀಡಿ ಅದನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಸೂಚಿಸಿದ್ದರು.
ಮೃಣಾಂಕ್ ಹೇಳಿದ ವಸ್ತುಗಳನ್ನು ನೀಡದೆ ಇದ್ದಾಗ, ಪಂತ್ ಅವರು ಲೀಗಲ್ ನೋಟಿಸ್ ನೀಡಿದರು. ಈ ವೇಳೆ ಮೃಣಾಂಕ್ 1.63 ಕೋಟಿ ರೂ. ಚೆಕ್ ಅನ್ನು ನೀಡಿದ್ದ, ಆದರೆ ಪಂತ್ ಅದನ್ನು ನಗದು ಮಾಡಲು ಪ್ರಯತ್ನಿಸಿದಾಗ, ಸಾಕಷ್ಟು ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು.