ಸರ್ಕಾರದ ನಿರ್ಧಾರ ನಮಗೆ ಬೇಸರ ತಂದಿದೆ: ಪುನೀತ್ ಅಸಮಾಧಾನ
Team Udayavani, Apr 3, 2021, 8:26 AM IST
ಸರ್ಕಾರದ ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆ, ತಮ್ಮ ಫೇಸ್ ಬುಕ್ ಮೂಲಕ “ಯುವರತ್ನ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಅವರೊಂದಿಗೆ ಲೈವ್ ಬಂದ ನಟ ಪುನೀತ್ ರಾಜಕುಮಾರ್ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ಹೊರ ಹಾಕಿ, ನಿರ್ಧಾರವನ್ನು ವಾಪಾಸ್ ಪಡೆಯುವಂತೆ ಕೇಳಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “”ಯುವರತ್ನ’ ಸಿನಿಮಾಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಪ್ರೇಕ್ಷಕರು ಕೂಡ ಸಾಕಷ್ಟು ಜಾಗೃತೆ ವಹಿಸುತ್ತಿದ್ದಾರೆ. ಸುರಕ್ಷಿತವಾಗಿ ಬಂದು ಸಿನಿಮಾ ನೋಡಿ, ಖುಷಿಪಡುತ್ತಿದ್ದಾರೆ. ಥಿಯೇಟರ್ ಗಳಲ್ಲೂ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಷ್ಟೇ ಚಿತ್ರರಂಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಬಿಡುಗಡೆಯಾದ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಥಿಯೇಟರ್, ಮಲ್ಟಿಪ್ಲೆಕ್ಸ್ಗಳ ಕಡೆಗೆ ಬರುತ್ತಿದ್ದಾರೆ. ಹೀಗಿರುವಾಗ, ಯಾವುದೇ ಮುನ್ಸೂಚನೆ ಇಲ್ಲದೆ, ಇದ್ದಕ್ಕಿದ್ದಂತೆ 50% ಪ್ರವೇಶಕ್ಕೆ ಅನುಮತಿ ನೀಡಿದರೆ, ಥಿಯೇಟರ್ನವರು, ವಿತರಕರು, ನಿರ್ಮಾಪಕರು ಹೀಗೆ ಎಲ್ಲರಿಗೂ ತೊಂದರೆಯಾಗುತ್ತದೆ. ಆದ್ದರಿಂದ, ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದಿದ್ದಾರೆ.
ಈಗಾಗಲೇ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ “ಯುವರತ್ನ’ ಸಿನಿಮಾ ಹೌಸ್ ಫುಲ್ ಶೋಗಳನ್ನು ಕಾಣುತ್ತಿದೆ. ಪ್ರೇಕ್ಷಕರು ಕೂಡ ತುಂಬ ಖುಷಿಪಟ್ಟು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ, ಫ್ಯಾಮಿಲಿಗೆ ಬೇಕಾದಂತಹ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಇದೆ ಎಂದು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈಗಾಗಲೇ ಮುಂಬರುವ ಕೆಲ ದಿನಗಳವರೆಗೆ ಶೋಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಕೂಡ ಆಗಿದೆ. ಹೀಗಿರುವಾಗ ಪ್ರೇಕ್ಷಕರಿಗೆ 50% ಪ್ರವೇಶಕ್ಕೆ ಅವಕಾಶ ಕೊಟ್ಟರೆ, ಎಲ್ಲರಿಗೂ ತೊಂದರೆಯಾಗುತ್ತದೆ. ಸರ್ಕಾರದ ಈ ನಿರ್ಧಾರ ನಮಗೆ ನಿಜಕ್ಕೂ ಶಾಕ್ ಮತ್ತು ಬೇಸರ ಎರಡಕ್ಕೂ ಕಾರಣವಾಗಿದೆ’ ಎಂದಿದ್ದಾರೆ.