ರಾಧಿಕಾ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ; ರಂಗಿ ಹುಡ್ಗಿಯ ಹೊಸ ಚಿತ್ರ
Team Udayavani, Mar 9, 2017, 12:52 PM IST
ಶಿವರಾಜಕುಮಾರ್ ಅಭಿನಯದ “ಕಬೀರ’ ಚಿತ್ರದ ನಂತರ ನಿರ್ದೇಶಕ ನರೇಂದ್ರ ಬಾಬು ಅಲಿಯಾಸ್ ಇಂದ್ರ ಬಾಬು ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದ ಮೂಲಕ ಬಂದಿದ್ದಾರೆ. ಹೊಸ ವರ್ಷದಲ್ಲಿ ಅನಂತ್ನಾಗ್ ಅಭಿನಯದಲ್ಲಿ ಹೊಸ ಚಿತ್ರ ಮಾಡುವುದಾಗಿ ಹೇಳಿದ್ದ ಅವರು, ಅದರಂತೆ ಅನಂತ್ನಾಗ್ ಅಭಿನಯದಲ್ಲಿ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಚಿತ್ರವನ್ನು ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರ ಏಪ್ರಿಲ್ 3ರಿಂದ ಪ್ರಾರಂಭವಾಗಲಿದೆ.
ಅಂದಹಾಗೆ, ಎರಡು ಪಾತ್ರಗಳ ಸುತ್ತ ಸುತ್ತುವ ಈ ಚಿತ್ರದಲ್ಲಿ ಅನಂತ್ನಾಗ್ ಎದುರು “ರಂಗಿತರಂಗ’ದ ರಾಧಿಕಾ ಚೇತನ್ ಅಭಿನಯಿಸುತ್ತಿದ್ದಾರಂತೆ. “ಬಹುತೇಕ ಎರಡೇ ಪಾತ್ರಗಳ ಸುತ್ತ ಸುತ್ತುವ ಕಥೆಯಿದು. ಪ್ರಮುಖವಾಗಿ ಎರಡು ತಲೆಮಾರಿನವರ ಕುರಿತು ಹೇಳುವುದಕ್ಕೆ ಹೊರಟಿದ್ದಾರೆ. ಹಾಸ್ಯಮಯವಾಗಿ ಶುರುವಾಗುವ ಚಿತ್ರವು, ನಂತರ ಕ್ರಮೇಣ ಗಂಭೀರವಾಗುತ್ತಾ ಹೋಗುತ್ತದೆ’ ಎನ್ನುತ್ತಾರೆ ಬಾಬು. ಈ ಚಿತ್ರವನ್ನು ಕಲರ್ಸ್ ಆಫ್ ಆನೇಕಲ್ ಹೆಸರಿನಲ್ಲಿ ಸುದರ್ಶನ್, ರಾಮಮೂರ್ತಿ ಮತ್ತು ಈರಣ್ಣ ಎನ್ನುವವರು ನಿರ್ಮಿಸುತ್ತಿದ್ದಾರಂತೆ.
ಇನ್ನು “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದಲ್ಲಿ ಸಾಕಷ್ಟು ರಂಗಭೂಮಿಯ ಕಲಾವಿದರು ಇರುತ್ತಾರಂತೆ. ಇನ್ನೊಂದು ವಿಶೇಷತೆಯೆಂದರೆ, ಖ್ಯಾತ ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ್ ಸಂಗೀತ ನಿರ್ದೇಶನ ಮಾಡುತ್ತಿರುವುದು. “ಕಬೀರ’ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದ ರಾಮಚಂದ್ರ ಅವರು, ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.