ಭಗವಾನ್ ಕನಸು ಈಡೇರಿಸುವೆ: ರಾಘಣ್ಣ
Team Udayavani, Feb 22, 2023, 2:36 PM IST
ಹಿರಿಯ ನಿರ್ದೇಶಕ ಎಸ್. ಕೆ ಭಗವಾನ್ ಅವರಿಗೆ ಡಾ. ರಾಜಕುಮಾರ್ ಅಭಿನಯದ “ಮಂತ್ರಾಲಯ ಮಹಾತ್ಮೆ ಸಿನಿಮಾವನ್ನು ವರ್ಣಮಯವಾಗಿಸಿ ತೆರೆಮೇಲೆ ತರುವ ಕನಸಿತ್ತು. ಸ್ವತಃ ಭಗವಾನ್ ಅನೇಕ ಸಂದರ್ಭದಲ್ಲಿ ಇಂಥದ್ದೊಂದು ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಭಗವಾನ್ ಬದುಕಿದ್ದಾಗ ಅವರ ಈ ಕನಸು ಈಡೇರಲು ಸಾಧ್ಯವಾಗಿರಲಿಲ್ಲ. ಅವರ ನಿಧನದ ನಂತರ ಈ ಕನಸನ್ನು ಹಿರಿಯ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಈಡೇರಿಸುವ ಭರವಸೆ ನೀಡಿದ್ದಾರೆ.
ಎಸ್. ಕೆ ಭಗವಾನ್ ನಿಧನದ ಬಳಿಕ ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ರಾಜಕುಮಾರ್, “ಭಗವಾನ್ ಮಾಮಗೆ ಅಪ್ಪಾಜಿ ಅಭಿನಯಿಸಿದ್ದ “ಮಂತ್ರಾಲಯ ಮಹಾತ್ಮೆ’ ಸಿನಿಮಾವನ್ನು ಕಲರ್ ಪ್ರಿಂಟ್ ಮಾಡಿಸಿ ಬಿಡುಗಡೆ ಮಾಡಬೇಕೆಂಬ ದೊಡ್ಡದೊಂದು ಕನಸಿತ್ತು. ಆದರೆ ಅವರು ಬದುಕಿದ್ದಾಗ ಅದು ಸಾಧ್ಯವಾಗಲಿಲ್ಲ. ಅವರ ಕನಸನ್ನು ನಾನು ಈಡೇರಿಸುತ್ತೇನೆ. ಆದಷ್ಟು ಬೇಗ “ಮಂತ್ರಾಲಯ ಮಹಾತ್ಮೆ’ ಸಿನಿಮಾವನ್ನು ಕಲರ್ ಪ್ರಿಂಟ್ ಮಾಡಿಸಿ ಬಿಡುಗಡೆ ಮಾಡಿಸುತ್ತೇನೆ’ ಎಂದಿದ್ದಾರೆ.