ನೇಗಿಲ ಒಡೆಯನ ಸಾಹಸಗಾಥೆ
Team Udayavani, Aug 29, 2018, 11:45 AM IST
ಈಗಾಗಲೇ ರೈತನ ಕುರಿತು ಸಾಕಷ್ಟು ಸಿನಿಮಾಗಳು ಬಂದಿವೆ. ರೈತ ದೇಶದ ಬೆನ್ನುಲುಬು ಎಂಬ ವಿಷಯವನ್ನಿಟ್ಟುಕೊಂಡು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾಗಳು ತೆರೆಗೆ ಬಂದಿವೆ. ಈಗ ರೈತನ ಕುರಿತಾಗಿ ಮತ್ತೂಂದು ಸಿನಿಮಾ ಬರುತ್ತಿದೆ. ಅದು “ನೇಗಿಲ ಒಡೆಯ’. ರೈತನನ್ನು ಕಡೆಗಣಿಸಬೇಡಿ, ಆತ ಸಾಧನೆ ಮಾಡಬಲ್ಲ ಎಂಬ ಸಂದೇಶ ಹೇಳುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಎನ್.ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದಾರೆ.
ಎಲ್ಲಾ ಓಕೆ, “ನೇಗಿಲ ಒಡೆಯ’ನ ಕಥೆಯೇನು ಎಂದು ನೀವು ಕೇಳಬಹುದು. ಕೃಷಿ ಕುರಿತ ಕೋರ್ಸ್ ಮುಗಿಸಿದ ನಾಯಕ ಹಳ್ಳಿಗೆ ಬಂದು ವ್ಯವಸಾಯ ಮಾಡಿಕೊಂಡು ಶ್ರೀಮಂತ ಯುವತಿಯ ಪ್ರೇಮದಲ್ಲಿ ಬೀಳುತ್ತಾನೆ. ನಾಯಕಿಯ ತಂದೆ ಒಬ್ಬ ರೈತನಿಗೆ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ನಾಯಕ ವಿಶ್ವಮಟ್ಟದಲ್ಲಿ ಸೆಲೆಬ್ರಿಟಿಯಾಗಿ ಗುರುತಿಸಿಕೊಳ್ಳುವ ಮೂಲಕ ರೈತರನ್ನು ಕಡೆಗಣಿಸಬೇಡಿ ಎಂದು ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ.
ಬಳ್ಳಾರಿ, ಸಂಡೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸೂರ್ಯೋದಯ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿಕ್ಟರಿ ಡ್ಯಾನಿಯಲ್ ಸಂಗೀತ, ಎಸ್.ಬಾಲು ಛಾಯಾಗ್ರಹಣ, ಮಂಜು ಸಂಕಲನ, ಕ್ರೇಜಿ ಶ್ರೀಧರ್ ನೃತ್ಯ ನಿರ್ದೇಶನ, ಹೇಮಂತ್, ಸಿ.ಎನ್.ಮೂರ್ತಿ ಸಾಹಿತ್ಯವಿದೆ. ಭಾನುಪ್ರಕಾಶ್, ಪ್ರಿಯಾಪಾಂಡೆ, ಅಮರನಾಥ್ ಆರಾಧ್ಯ, ಬಲರಾಮ್, ಜಯಣ್ಣ, ಜಿಮ್ಶಿವು, ಬಳ್ಳಾರಿ ಮಂಜು ಅಶೋಕ್, ನಾಗರಾಜ್, ಹೇಮಂತ್, ಮೂರ್ತಿ, ವೆಂಕಟೇಶ್ ಮುಂತಾದವರು ನಟಿಸಿದ್ದಾರೆ.