ಕೋವಿಡ್ 19: ದಿಲ್ಲಿ-ಗಾಜಿಯಾಬಾದ್ ಗಡಿ ದಿಢೀರ್ ಬಂದ್: ಇಕ್ಕಟ್ಟಿಗೆ ಸಿಲುಕಿದ ನೂರಾರು ಮಂದಿ
ಆರು ಮಂದಿಗೆ ಕೋವಿಡ್ ವೈರಸ್ ಇದ್ದಿರುವುದು ಪತ್ತೆಯಾದ ನಂತರ ರಾಷ್ಟ್ರೀಯ ವಿಪತ್ತು ಕಾಯ್ದೆ 2005ರ ಪ್ರಕಾರ ಆದೇಶ ಹೊರಡಿಸಲಾಗಿದೆ
Team Udayavani, Apr 21, 2020, 8:22 PM IST
Representative Image
ಗಾಜಿಯಾಬಾದ್: ಮಾರಣಾಂತಿಕ ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಗಡಿಭಾಗವನ್ನು ಬಂದ್(ಸೀಲ್) ಮಾಡುವಂತೆ ಉತ್ತರಪ್ರದೇಶ ಗಾಜಿಯಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ನೀಡಿದ ಪರಿಣಾಮ ತುರ್ತು ಸೇವೆ ವಾಹನ ಸೇರಿದಂತೆ ನೂರಾರು ಜನರು ದಿಲ್ಲಿ-ಗಾಜಿಯಾಬಾದ್ ಗಡಿಯಲ್ಲಿ ಸಿಕ್ಕಿಹಾಕಿಕೊಂಡ ಘಟನೆ ಮಂಗಳವಾರ ನಡೆದಿದೆ.
ಗಡಿಭಾಗವನ್ನು ಬಂದ್ ಮಾಡಿದ್ದರಿಂದ ದಿಲ್ಲಿ-ಗಾಜಿಯಾಬಾದ್ ಹೆದ್ದಾರಿಯಲ್ಲಿ ವಾಹನಗಳು ಸಾಲು, ಸಾಲಾಗಿ ನಿಂತಿರುವುದಾಗಿ ವರದಿ ತಿಳಿಸಿದೆ. ಮುಂದಿನ ಸೂಚನೆವರೆಗೆ ದಿಲ್ಲಿ ಹಾಗೂ ಗಾಜಿಯಾಬಾದ್ ನಡುವೆ ಯಾವುದೇ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ದಿಲ್ಲಿಯಿಂದ ಬಂದ ಆರು ಮಂದಿಗೆ ಕೋವಿಡ್ ವೈರಸ್ ಇದ್ದಿರುವುದು ಪತ್ತೆಯಾದ ನಂತರ ರಾಷ್ಟ್ರೀಯ ವಿಪತ್ತು ಕಾಯ್ದೆ 2005ರ ಪ್ರಕಾರ ಆದೇಶ ಹೊರಡಿಸಲಾಗಿದೆ ಎಂದು ಪಾಂಡೆ ವಿವರಿಸಿದ್ದಾರೆ.
ಮಂಗಳವಾರ ಬೆಳಗ್ಗೆ ವೈದ್ಯರು, ಬ್ಯಾಂಕ್ ಉದ್ಯೋಗಿಗಳು ಎರಡೂ ಕಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಪೊಲೀಸರು ವಾಹನ ಸಂಚಾರಕ್ಕೆ ಅವಕಾಶ ಕೊಡಲು ನಿರಾಕರಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.