ಮೃತರ ಕುಟುಂಬಕ್ಕೆ 2 ಲಕ್ಷ ವೈಯಕ್ತಿಕ ಪರಿಹಾರ
Team Udayavani, May 20, 2019, 11:39 AM IST
ಗುಳೇದಗುಡ್ಡ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹಾಗೂ ತಾವು ತಲಾ ಒಂದೊಂದು ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.
ರವಿವಾರ ಹಳದೂರಲ್ಲಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ನಂತರ ಪರಿಹಾರ ಕೊಡಿಸಲಾಗುವುದು. ಈಗ ಲೋಕಸಭಾ ಚುನಾವಣೆಯ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿದೆ. ಮುಖ್ಯಮಂತ್ರಿಗಳಿಗೆ ಅಪಘಾತದ ಮಾಹಿತಿ ನೀಡಿರುವೆ. ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ, ಶಾಸಕ ಸಿದ್ದರಾಮಯ್ಯ ಹಾಗೂ ತಾವು ವೈಯಕ್ತಿಕವಾಗಿ ಇಬ್ಬರು ಸೇರಿ ಎರಡು ಲಕ್ಷ ರೂ ಪರಿಹಾರ ನೀಡುತ್ತೇವೆ. ಮತ್ತು ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರನ್ನು ಗುಣಮುಖರನ್ನಾಗಿ ಮನೆಗೆ ಕಳಿಸುತ್ತೇವೆ ಎಂದು ಶಿವಾನಂದ ಪಾಟೀಲ ಹೇಳಿದರು.
ಸಂಸದ ಗದ್ದಿಗೌಡರ ಭೇಟಿ: ಹಳದೂರು ಗ್ರಾಮಕ್ಕೆ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಮಹಾಂತೇಶ ಮಮದಾಪುರ ಭೇಟಿ ನೀಡಿ ಸಾಂತ್ವನ ಹೇಳಿದರು. ಡಯಲಾಸೀಸ್ ಉಪಕರಣ ನೀಡಲು ಸೂಚನೆ: ಗುಳೇದಗುಡ್ಡ ಸರಕಾರಿ ಆಸ್ಪತ್ರೆಗೆ ಮಂಜೂರಾಗಿರುವ ಡಯಲಾಸಿಸ್ ಉಪಕರಣಗಳನ್ನು ಪೂರೈಸುವಂತೆ ಸಚಿವ ಶಿವಾನಂದ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು. ನಾನು ಕಳೆದ ಮೂರು ತಿಂಗಳ ಹಿಂದೆಯೇ ಪೂರೈಸುವಂತೆ ಹೇಳಿದ್ದೆ, ಇದುವರೆಗೂ ಏಕೆ ಆಗಿಲ್ಲ ಎಂದು ಡಿಎಚ್ಒ ಅವರನ್ನು ಪ್ರಶ್ನಿಸಿದರು.
ಉಪಕರಣಗಳನ್ನು ಒಂದು ಕಡೆಯಿಂದ ತರಬೇಕಿದ್ದು, ಸದ್ಯಕ್ಕೆ ಗುಳೇದಗುಡ್ಡ ಪಟ್ಟಣದ ಆಸ್ಪತ್ರೆಗೆ ಎರಡು ಡಯಲಾಸಿಸ್ ಉಪಕರಣ ಪೂರೈಸಲಾಗುವುದು. ಈ ಬಗ್ಗೆ ಮೇಲಧಿಕಾರಿಗಳು ತಿಳಿಸಲಾಗಿದೆ ಎಂದು ಡಿಎಚ್ಒ ಹೇಳಿದರು. ಈ ಬಗ್ಗೆ ವರದಿ ನೀಡುವಂತೆ ಸಚಿವರು ಸೂಚಿಸಿದರು.