ಬಾಗಲಕೋಟೆ: ನ್ಯಾಯಾಧಿಶರ ತಾಯಿಗೂ ಸೇರಿದಂತೆ ಜಿಲ್ಲೆಯಲ್ಲಿ ಇಂದು 33 ಜನರಿಗೆ ಪಾಸಿಟಿವ್ ದೃಢ
Team Udayavani, Jul 6, 2020, 8:29 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬಾಗಲಕೋಟೆ: ಜಿಲ್ಲೆಯಲ್ಲಿ ಇಂದು ಒಂದೇ ದಿನ 33 ಜನರಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಕಾಣಿಸಿಕೊಂಡಿದೆ.
ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯ ಜನರಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ನ್ಯಾಯಾಧೀಶರೊಬ್ಬರ ತಾಯಿಯಲ್ಲೂ ಇಂದು ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ, ನ್ಯಾಯಾಧೀಶರು ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ 80 ವರ್ಷ ಪ್ರಾಯದ ತಾಯಿ ಇಲ್ಲಿನ ವಿದ್ಯಾಗಿರಿ ಪರಿಸರದಲ್ಲಿ ವಾಸಿಸುತ್ತಿದ್ದಾರೆ.
ಇನ್ನುಳಿದಂತೆ, ವಿದ್ಯಾಗಿರಿಯ ಕಟ್ಟಡ ನೀಲ ನಕ್ಷೆ ಸಿದ್ಧಪಡಿಸುವ ಕಂಪನಿ ಮಾಲಿಕ ಸಹಿತ ಅವರ ಕುಟುಂಬದ ನಾಲ್ವರು, ಇಳಕಲ್ಲದ 12 ಜನ, ಚಿಕ್ಕಮ್ಯಾಗೇರಿಯ 5, ಜಮಖಂಡಿಯಲ್ಲಿ 4, ಬಾದಾಮಿಯ 1 ಹಾಗೂ ಕಲಾದಗಿಯ ಆರು ಜನರಿಗೆ ಸೇರಿದಂತೆ ಒಟ್ಟು 33 ಜನರಿಗೆ ಇಂದು ಕೋವಿಡ್ 19 ಸೋಂಕು ದೃಢಪಟ್ಟಿದೆ.
ಜಮಖಂಡಿ ತಾಲೂಕು ವೈದ್ಯಾಧಿಕಾರಿಗೂ ಸೋಂಕು ತಗುಲಿದ್ದು, ಅವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾಗಲಕೋಟೆ ನಗರದ ಖ್ಯಾತ ನರರೋಗ ತಜ್ಞ ವೈದ್ಯರಿಗೂ ಸೋಂಕು ದೃಢಪಟ್ಟಿದ್ದು, ಇವರುನಗರದ ಮೂರು ಖಾಸಗಿ ಆಸ್ಪತ್ರೆಯಲ್ಲಿ ಸಂಪರ್ಕ ವೈದ್ಯಾಧಿಕಾರಿಯೂ ಆಗಿದ್ದರು. ಹೀಗಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ 19 ಭೀತಿ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸೋಂಕು ತೀವ್ರವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮದುವೆ, ಸೀಮಂತ ಕಾರ್ಯಕ್ರಮ ಹಾಗೂ ಮಾಹಿತಿ ನೀಡದೇ ಅಂತ್ಯಕ್ರಿಯೆ ಮಾಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಉಪನೋಂದಣಿ ಕಚೇರಿಯಲ್ಲಿ ವಧು-ವರ, ಇಬ್ಬರು ಸಾಕ್ಷಿದಾರರ ಸಹಿತ ಮಾತ್ರ ಮದುವೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ರಾಜೇಂದ್ರ ತಿಳಿಸಿದ್ದಾರೆ.