ರೈತರಿಗೆ 5 ಕೋಟಿ ಬಾಕಿ; ಕಾಂಗ್ರೆಸ್ ಮುಖಂಡನ ಸಕ್ಕರೆ ಕಾರ್ಖಾನೆ ಆಸ್ತಿ ಹರಾಜಿಗೆ ಆದೇಶ
Team Udayavani, Sep 18, 2019, 8:38 PM IST
ಬಾಗಲಕೋಟೆ : ಜಿ.ಪಂ. ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡರೂ ಆಗಿರುವ ಶಿವಕುಮಾರ ಮಲಘಾಣ ಅವರ ಸಕ್ಕರೆ ಕಾರ್ಖಾನೆ ಚರ ಮತ್ತು ಸ್ಥಿರಾಸ್ತಿ ಹರಾಜಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸುವಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶಿಸಿದ್ದಾರೆ.
ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಸಾವರಿನ್ ಇಂಡಸ್ಟ್ರೀಸ್ ಲಿ. ಕಾರ್ಖಾನೆಯವರು ರೈತರಿಗೆ ಕಬ್ಬು ಬಾಕಿ ಸಂಪೂರ್ಣ ಪಾವತಿಸದ ಹಿನ್ನಲೆಯಲ್ಲಿ ಕಾರ್ಖಾನೆಯ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ನಿಯಮಾನುಸಾರ ಹರಾಜು ಮಾಡಿ ಬಂದ ಮೊತ್ತದಿಂದ ರೈತರಿಗೆ ಬಾಕಿ ಕೊಡಬೇಕು ಎಂದು ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ.
ಜಿಲ್ಲೆಯ 11 ಸಕ್ಕರೆ ಕಾರ್ಖಾನೆಗಳು 2018-19 ಹಂಗಾಮಿಗೆ ಕಬ್ಬು ನುರಿಸಿದ್ದು, ಈ ಪೈಕಿ 10 ಕಾರ್ಖಾನೆಗಳು ನಿಯಮಾನುಸಾರ ಕಬ್ಬು ಬೆಲೆ ಬಾಕಿ ಸಂಪೂರ್ಣವಾಗಿ ಸಂದಾಯ ಮಾಡಿದ್ದಾರೆ. ಆದರೆ ತೇರದಾಳದ ಸಾವರಿನ್ ಇಂಡಸ್ಟ್ರಿಲ್ ಲಿ. ಕಾರ್ಖಾನೆಯವರು ಬಾಕಿ ಪಾವತಿಸದೆ ಅಂದಾಜು 5 ಕೋಟಿ ರೂ. ಮೊತ್ತವನ್ನು ಉಳಿಸಿಕೊಂಡಿರುತ್ತಾರೆ. ಆದೇಶದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು,ಕರ್ನಾಟಕ
ಭೂಕಂದಾಯ ಕಾಯ್ದೆ 1964 ಕಲಂ 190ರನ್ವಯ ರಬಕವಿಬನಹಟ್ಟಿ ತಹಶೀಲ್ದಾರ ಇವರಿಗೆ ಕಾರ್ಖಾನೆಯ ಚರಾಸ್ತಿ ಹಾಗೂ ಚಿರಾಸ್ತಿಗಳನ್ನು ಹರಾಜು ಮಾಡಲು ಆದೇಶಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ ಭೂ ಕಂದಾಯ ನಿಯಮಗಳ ಅನ್ವಯ ಹರಾಜು ಹಾಗೂ ವಸೂಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ಪ್ರಕ್ರಿಯೆ ಮುಗಿದ ತಕ್ಷಣ ರೈತರಿಗೆ ಕಬ್ಬು ಬೆಲೆ ಬಾಕಿ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.