ಬುದ್ನಿಪಿಡಿ ಕೋವಿಡ್ ಕೇರ್ ಸೆಂಟರ್ಗೆ ಎಸಿ ಭೇಟಿ
Team Udayavani, Aug 7, 2020, 1:53 PM IST
ಮಹಾಲಿಂಗಪುರ: ಪಟ್ಟಣದ ಬುದ್ನಿಪಿಡಿ ಹಾಸ್ಟೆಲ್ನಲ್ಲಿರುವ ಕೋವಿಡ್ ಕೇರ್ ಸೆಂಟರ್ಗೆ ಜಮಖಂಡಿ ಉಪ ವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಭೇಟಿ ನೀಡಿ ಕೋವಿಡ್ ಸೋಂಕಿತರ ಆರೋಗ್ಯ ಮತ್ತು ಅಲ್ಲಿನ ಮೂಲಭೂತ ಸೌಲಭ್ಯಗಳ ಕುರಿತು ವಿಚಾರಿಸಿದರು.
ಸೋಂಕಿತರು ಬಿಸಿನೀರಿನ ಸಮಸ್ಯೆಯ ಕುರಿತು ತಿಳಿಸಿದಾಗ ಸೆಂಟರ್ ಉಸ್ತುವಾರಿ ವೈದ್ಯರು ಮತ್ತು ಅಧಿಕಾರಿಗಳಿಗೆ ಉತ್ತಮ ಉಪಹಾರ-ಊಟ ಮತ್ತು ಬಿಸಿನೀರು ಪೂರೈಕೆ ಮಾಡಲು ಸೂಚಿಸಿದರು. ಕೋವಿಡ್ ಕೇರ್ನ ನಿಯಮ ಪಾಲಿಸುವ ಮೂಲಕ ಶೀಘ್ರ ಗುಣಮುಖರಾಗಿರಿ ಎಂದು ವಿನಂತಿಸಿದರು. ತಹಶೀಲ್ದಾರ್ ಪ್ರಶಾಂತ ಚನಗೊಂಡ, ಉಪತಹಶೀಲ್ದಾರ್ ಎಸ್.ಬಿ.ಕಾಂಬಳೆ, ಕಂದಾಯ ಇಲಾಖೆ ಅಧಿಕಾರಿ ಬಿ.ಎಸ್. ತಾಳಿಕೋಟಿ, ಆರೋಗ್ಯಾ ಧಿಕಾರಿ ಗೈಬುಸಾಬ ಗಲಗಲಿ, ಮುಖ್ಯಾ ಧಿಕಾರಿ ಬಿ.ಆರ್.ಕಮತಗಿ, ಮಹಾಲಿಂಗಪುರ ಠಾಣಾ ಧಿಕಾರಿ ಜಿ.ಎಸ್. ಉಪ್ಪಾರ, ಕಿರಿಯ ಆರೋಗ್ಯ ನಿರೀಕ್ಷಕ ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ ಸೇರಿದಂತೆ ಹಲವರು ಇದ್ದರು.
ಗುರುವಾರ ಯಾವುದೇ ಪ್ರಕರಣವಿಲ್ಲ: ಮಹಾಲಿಂಗಪುರ ಮತ್ತು ಸಮೀರವಾಡಿ ಭಾಗದಲ್ಲಿ ಗುರುವಾರ ಯಾವುದೇ ಕೊರೊನಾ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗರ್ಭಿಣಿ ಸೇರಿ ಮೂವರಿಗೆ ಸೋಂಕು : ಪಟ್ಟಣದಲ್ಲಿ ಗರ್ಭಿಣಿ ಸೇರಿದಂತೆ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 75ಕ್ಕೆ ಏರಿದೆ. ಗಣಪತಿ ಗಲ್ಲಿಯ 55 ವರ್ಷದ ಪುರುಷ ಹಾಗೂ 65 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಪ್ರಭುದೇವರ ದೇವಸ್ಥಾನ ಬಳಿಯ 23 ವರ್ಷದ ಗರ್ಭಿಣಿಗೆ ಸೋಂಕು ದೃಢ ಪಟ್ಟಿದ್ದು, ಸೋಂಕಿತರನ್ನು ತಾಲೂಕಿನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.