ಮುಂಗಾರು ಹಂಗಾಮಿಗೆ ಅಣಿ
ಕೃಷಿ ಚಟುವಟಿಕೆಯಲ್ಲಿ ಮಗ್ನ | ಕುಂಟಿ- ಜೋಡೆತ್ತುಗಳೊಂದಿಗೆ ಹೊಲದತ್ತ ಹೆಜ್ಜೆ
Team Udayavani, May 20, 2021, 2:58 PM IST
ಶಿರೂರ: ಮುಂಗಾರು ಹಂಗಾಮಿಗೆ ರೈತ ಬಾಂಧವರು ಸಿದ್ಧತೆ ಆರಂಭಿಸಿದ್ದು, ಶಿರೂರ, ಬೆನಕಟ್ಟಿ, ನೀಲಾನಗರ, ಬೇವಿನಮಟ್ಟಿ, ಗುಂಡನಪಲ್ಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.
ಕಳೆದ ಬಾರಿ ಮುಂಗಾರು ಉತ್ತಮವಾಗದಿದ್ದರೂ ಸೂಕ್ತ ಬೆಳೆ ಇಲ್ಲದೆ ರೈತರು ಕಷ್ಟ ಪಡಬೇಕಾಯಿತು. ಕಳೆದ ವರ್ಷದಿಂದ ಈ ವರ್ಷದ ಮುಂಗಾರು ಪ್ರಾರಂಭದ ಮುನ್ನವೇ ಕೊರೊನಾ ವಕ್ಕರಿಸಿ ಎಲ್ಲರ ಬದುಕನ್ನು ಬರಿದಾಗಿಸಿ ಸಂಕಷ್ಟಕ್ಕೆ ಸಿಗುವಂತೆ ಮಾಡಿದೆ. ಕೋವಿಡ್ ಮಧ್ಯದಲ್ಲಿ ಸರಕಾರ ಕೃಷಿ ಚಟುವಟಿಕೆಗಳಿಗೆ ರಿಯಾಯಿತಿ ನೀಡಿದ್ದರಿಂದ ರೈತ ಸಮುದಾಯ ಮುಂಗಾರು ಹಂಗಾಮಿನ ಕಾಮಗಾರಿಯಲ್ಲಿ ಮಗ್ನರಾಗಿದ್ದಾರೆ. ವರ್ಷವಿಡಿ ಜಾನುವಾರುಗಳಿಗೆ ಬೇಕಾಗುವ ಒಣಮೇವು, ಹೊಟ್ಟನ್ನು ಬಣವೆಗಳ ಮೂಲಕ ಸಂಗ್ರಹ ಮಾಡಿಕೊಂಡಿಟ್ಟಿದ್ದಾರೆ.
ಬಿತ್ತನೆ ಪೂರ್ವದಲ್ಲಿ ಭೂಮಿ ಹದಗೊಳಿಸಲು ರೈತರು ಕುಂಟಿ, ಜೋಡೆತ್ತುಗಳೊಂದಿಗೆ ಬೆಳಗ್ಗೆ ಹೊಲದತ್ತ ಹಜ್ಜೆ ಹಾಕುತ್ತಿದ್ದಾನೆ. ಈಗಾಗಲೇ ಕೃತ್ತಿಕಾ ಮಳೆ ಚಾಲ್ತಿಯಲ್ಲಿದ್ದು ಮುಂಬರುವ ರೋಹಿಣಿ ಮಳೆ ಉತ್ತಮವಾಗಿಯಾದರೇ ರೈತರ ಬಿತ್ತನೆಗೆ ಉಡಿ ಕಟ್ಟಿಸುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ರೈತ ಸಿದ್ಲಿಂಗಪ್ಪ ಅಚನೂರ.
ರೋಹಿಣಿ ಮಳೆ ಸುರಿದರೆ, ಮುಂಗಾರು ಬೆಳೆ ಸಜ್ಜೆ, ತೊಗರಿ, ಹೆಸರು, ಸೂರ್ಯ ಕಾಂತಿ, ಗೋವಿನಜೋಳ ಬಿತ್ತಲು ಮುಂದಾಗುತ್ತಾನೆ. ಕೃಷಿ ಕಾರ್ಯಗಳಿಗೆ ಅವಕಾಶ ಕಲ್ಪಿಸಿದ್ದರಿಂದ ರೈತರು ಭೂಮಿ ಹದಗೊಳಿಸಿ ಮಡಕಿ ಹೊಡೆಯುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕೆಲವರು ಟ್ಯಾಂಕರ್ ಮೂಲಕ ಹೊಲ ಸ್ವತ್ಛತೆಗೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ರೋಹಿಣಿ ಮಳೆ ರೈತರಪಾಲಿಗೆ ಹರ್ಷದಾಯಕವಾಗಲಿ ಎಂಬುದು ಈ ಭಾಗದ ರೈತ ಸಮುದಾಯದ ಆಶಯ.