ಕಳಚಿದ ಸತ್ಸಂಗದ ಕೊಂಡಿ: ಸದಾನಂದ ಭಸ್ಮೆ ಮಹಾರಾಜರು ಇನ್ನಿಲ್ಲ
Team Udayavani, Feb 23, 2023, 9:36 AM IST
ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕು ಅಷ್ಟೇ ಅಲ್ಲದೆ ಬೆಂಗಳೂರು, ಶಿವಮೊಗ್ಗ, ಗೋವಾ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಭಕ್ತಗಣ ಹೊಂದಿದ್ದ ರಾಮಪೂರದ ಶಿವಾನಂದ ಕುಟೀರದ ಸದಾನಂದ ಭಸ್ಮೆ(82) ಮಹಾರಾಜರು ಬುಧವಾರ ಮಧ್ಯಾಹ್ನ ನಿಧನರಾದರು.
ಇವರು ಕುಬಕಡ್ಡಿಯ ರಂಗರಾವ್ ಮಹಾರಾಜರ ಶಿಷ್ಯರಾಗಿ, ಸತತ 60 ವರ್ಷಗಳಿಂದ ರಾಮಪೂರದಲ್ಲಿ ಶಿವಾನಂದ ಕುಟೀರವನ್ನು ಸ್ಥಾಪಿಸುವ ಮೂಲಕ ರಾಜ್ಯವಷ್ಟೇ ಅಲ್ಲದೆ ಗೋವಾ ರಾಜ್ಯದಲ್ಲಿಯೂ ಸತ್ಸಂಗದ ಕಂಪು ಸೂಸುವಲ್ಲಿ ಕಾರಣರಾಗಿ, ಗೋವಾದಲ್ಲಿರುವ ಸನಾತನ ಧರ್ಮ ಸಂಸ್ಥೆಯಿಂದ ಗೌರವ ಪ್ರಶಸ್ತಿ ಪಡೆದಿದ್ದಾರೆ. ಪಂಢರಪೂರದ ಪಂಡರಿನಾಥನ ಸಾಕಷ್ಟು ಭಕ್ತರ ಮೇಲೆ ಕೃತಿಗಳನ್ನು ರಚಿಸುವ ಮೂಲಕ ಧಾರ್ಮಿಕ ಕೃಷಿ ಮಾಡುವಲ್ಲಿ ನೆಮ್ಮದಿ ಕಂಡು, `ತುಕಾರಾಮ ಚೈತನ್ಯ ಗ್ರಂಥ’ ಹಾಗು `ಚೈತನ್ಯ ಧಾರೆ’ ಎಂಬ ಮಹಾ ಗ್ರಂಥಗಳನ್ನು ಬರೆದ ಕೀರ್ತಿ ಇವರದು.
ಈ ಭಾಗದ ಸಾವಿರಾರು ಜನರಿಗೆ ನಿರಂತರ ಸತ್ಸಂಗದ ಮೂಲಕ ಬದುಕು ಹಸನಾಗಿಸುವಲ್ಲಿ ಯಶಸ್ಸು ಕಂಡು ದಿನಂಪ್ರತಿ ಸಂಜೆ ಹೊತ್ತು ಆಧ್ಯಾತ್ಮ ಹಾಗು ಧಾರ್ಮಿಕತೆ ಕಡೆ ಜನರನ್ನು ಸೆಳೆಯುವಲ್ಲಿ ಯಶಸ್ಸು ಕಂಡವರು ಭಸ್ಮೆ ಮಹಾರಾಜರಾಗಿದ್ದರು.