ಸಿದ್ದರಾಮಯ್ಯರನ್ನು ಜೈಲಿಗೆ ಕಳಿಸೋಕೆ ಬಿಎಸ್ವೈ ಸಿಎಂ ಆಗ್ಬೇಕ?
Team Udayavani, Mar 4, 2017, 3:50 AM IST
ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ತಪ್ಪು ಮಾಡಿದ್ದರೆ ಈಗಲೇ ಜೈಲಿಗೆ ಕಳುಹಿಸಿ. ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಿ ನೀವು (ಯಡಿಯೂರಪ್ಪ) ಸಿಎಂ ಆಗಬೇಕಾ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗವಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾನು ಸಿಎಂ ಆದರೆ ರಾಜ್ಯದ ಇಂತಹ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತೇನೆಂದು ಹೇಳುವ ನಾಯಕರಿದ್ದಾರೆ. ಆದರೆ, ಯಡಿಯೂರಪ್ಪ ನಾನು ಸಿಎಂ ಆದ್ರೆ 24 ಗಂಟೆಯಲ್ಲಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ. ಇಂತಹ ದ್ವೇಷದ ರಾಜಕೀಯ ಬೇಕ? ಮುಖ್ಯಮಂತ್ರಿ ಮತ್ತು ಸಚಿವರು ತಪ್ಪು ಮಾಡಿದ್ದರೆ ಈಗಲೇ ಜೈಲಿಗೆ ಕಳುಹಿಸಿ. ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ’ ಎಂದರು.
ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬ ಕಾರಣದಿಂದ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಬ್ರಿಡ್ಜ್ ನಿರ್ಮಾಣ ವಿಷಯದಲ್ಲಿ ದಾಖಲೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ವಿನಾಕಾರಣ ಆರೋಪ ಹೊರುವುದು ಬೇಡ ಎಂಬ ಉದ್ದೇಶದಿಂದ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಯೋಜನೆ ಕೈ ಬಿಡಲಾಗಿದೆ ಎಂದು ಹೇಳಿದರು.