24 ವರ್ಷಗಳಿಂದ ರಬಕವಿಯಲ್ಲಿ ನಿರಂತರ ನೀರು ದಾನ
ಜಮೀನು ಇದ್ದರೂ ನೀರು ದಾನ ಮಾಡುತ್ತಿರುವ ಯಲ್ಲಪ್ಪ ಕೊಡಗನೂರ
Team Udayavani, May 10, 2019, 12:27 PM IST
ಬನಹಟ್ಟಿ: ರಬಕವಿ ಮಹಾಲಿಂಗಪುರ ನಾಕಾದ ಬಳಿ ಎರಡು ಬೋರ್ವೆಲ್ಗಳಿಂದ ನೀರು ದಾನ ಮಾಡುತ್ತಿರುವ ಯಲ್ಲಪ್ಪ ಕೊಡಗನೂರ.
ಬನಹಟ್ಟಿ; ರಬಕವಿ ಮಹಾಲಿಂಗಪುರ ನಾಕಾದ ಬಳಿ ವ್ಯಕ್ತಿಯೊಬ್ಬರು ತೋಟಕ್ಕೆ ನೀರುಣಿಸದೇ ಸಾರ್ವಜನಿಕರಿಗಾಗಿ ಎರಡು ಬೋರವೆಲ್ ಕೊರೆಯಿಸಿ ಕಳೆದ 24 ವರ್ಷಗಳಿಂದ ಸಾರ್ವಜನಿಕರಿಗೆ ನೀರು ದಾನ ಮಾಡುತ್ತಿದ್ದಾರೆ.
ಯಲ್ಲಪ್ಪ ಸಿದ್ದಪ್ಪ ಕೊಡಗನೂರ ಎಂಬುವವರು 24 ಎಕರೆಗೂ ಅಧಿಕ ಜಮೀನಿದ್ದರೂ ತಮ್ಮ ತೋಟಕ್ಕೆ ನೀರುಣಿಸದೇ ಸಾರ್ವಜನಿಕರಿಗಾಗಿ ನೀರು ದಾನ ಮಾಡುತ್ತಿರುವುದು ವಿಶೇಷ. ರಬಕವಿ ಬನಹಟ್ಟಿ, ಯಲ್ಲಟ್ಟಿ, ಹನಗಂಡಿ, ಚಿಮ್ಮಡ, ಹೊಸೂರ ಸೇರಿದಂತೆ ಹಲವು ಹಳ್ಳಿಗಳಿಗೆ ಉಚಿತವಾಗಿ ನೀರು ದಾನ ಮಾಡುತ್ತಿದ್ದಾರೆ.
ಅವಳಿ ನಗರದ ಅನೇಕ ವಾರ್ಡ್ಗಳಲ್ಲಿ ನೀರಿನ ತೊಂದರೆ ಕಂಡು ಬಂದರೆ ನೀರಿನ ಟ್ಯಾಂಕರ್ಗಳು, ಅಗ್ನಿಶಾಮಕ ಠಾಣೆಯ ವಾಹನ ಟ್ಯಾಂಕ್ಗೂ ಸಹ ಇಲ್ಲಿಂದಲೆ ನೀರನ್ನು ಉಚಿತವಾಗಿ ತುಂಬಿಕೊಡಲಾಗುತ್ತಿದೆ. ಸಾರ್ವಜನಿಕರಾಗಲಿ ಅಥವಾ ಸರ್ಕಾರಿ ಟ್ಯಾಂಕರ್ಗಳು ನೀರು ತುಂಬಿಕೊಂಡು ಹೋಗುತ್ತಾರೆ. ಆದರೆ, ಕಳೆದ ಮೂರು ವರ್ಷದ ಹಿಂದ ಒಂದು ಬೋರವೆಲ್ನಲ್ಲಿ ನೀರು ಕಡಿಮೆಯಾದಾಗ ಸ್ವಂತ ಹಣದಿಂದ ಮತ್ತೂಂದು ಬೋರವೆಲ್ ಕೊರೆಯಿಸಿ ನೀರು ಕೊಡಲು ಆರಂಭಿಸಿದ್ದಾರೆ.
ನಗರಸಭೆ ಎರಡು ಬೋರವೆಲ್ಗಳ ವಿದ್ಯುತ್ ಬಿಲ್ ಕೊಡುತ್ತಾರೆ. ಬೇಸಿಗೆಯಲ್ಲಿ ಎರಡೂ ಬೋರಗಳ ಬಿಲ್ ನೀಡಿದರೆ ಮಳೆಗಾಲದಲ್ಲಿ ಒಂದೇ ಬೋರವೆಲ್ ವಿದ್ಯುತ್ ಬಿಲ್ ತುಂಬುತ್ತಾರೆ ಎಂದರು. ಸಾರ್ವಜನಿಕರು ಬಳಸುವ ಬೋರವೆಲ್ಗಳಿಂದ ನೀರು ಹರಿದು ಹೋಗಿ ಗುಂಡಿಯಲ್ಲಿ ಶೇಖರಣೆಯಾಗುತ್ತದೆ. ಶೇಖರಣೆಯಾದ ನೀರನ್ನು ಹೊಲಗದ್ದೆಗಳಿಗೆ ಬಳಸುತ್ತೇವೆ ಎನ್ನುತ್ತಾರೆ ಯಲ್ಲಪ್ಪ.