ಪ್ರವಾಹ ಇಳಿಮುಖ: ಸಂಚಾರಕ್ಕೆ ಢವಳೇಶ್ವರ ಸೇತುವೆ ಮುಕ್ತ
Team Udayavani, Jun 22, 2021, 5:23 PM IST
ಮಹಾಲಿಂಗಪುರ: ಘಟಪ್ರಭಾ ನದಿಯ ಪ್ರವಾಹದಿಂದ ಜಲಾವೃತಗೊಂಡಿದ್ದ ಢವಳೇಶ್ವರ-ಢವಳೇಶ್ವರ ಸೇತುವೆ ಸೋಮವಾರ ಸಂಚಾರಕ್ಕೆ ಮುಕ್ತ ವಾಗಿದೆ. ಸೇತುವೆಯು ಸಂಚಾರಕ್ಕೆ ಮುಕ್ತಗೊಂಡ ಬಳಿಕ ಸುತ್ತಮುತ್ತಲಿನ ಗ್ರಾಮಗಳಲ್ಲಿನ ವಾಹನ ಸಂಚಾರ ಜೋರಾಗಿತ್ತು. ಈ ಮೂಲಕ ಬಾಗಲಕೋಟೆ-ಬೆಳಗಾವಿ ಜಿಲ್ಲೆಯ ಗಡಿಗ್ರಾಮಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ.
ಸೋಮವಾರ ಧುಪದಾಳ ಜಲಾಶಯಕ್ಕೆ 14565 ಕ್ಯೂಸೆಕ್ ಒಳಹರಿವು ಇದ್ದು, ಅದರಲ್ಲಿ 1501 ಕ್ಯೂಸೆಕ್ ಜಿಎಲ್ಬಿಸಿ ಕಾಲುವೆಗೆ, 13064 ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಸೋಮವಾರ ಸಂಜೆ ಢವಳೇಶ್ವರ ಗ್ರಾಮದ ಹತ್ತಿರ ಘಟಪ್ರಭಾ ನದಿಯ ಪ್ರವಾಹ ಇಳಿಮುಖವಾಗಿ ಸೇತುವೆಯು ಸಂಚಾರಕ್ಕೆ ಮುಕ್ತವಾಗಿದೆ.
ಇನ್ನು ಕೆಳಮಟ್ಟದಲ್ಲಿರುವ ನಂದಗಾಂವ- ಅವರಾದಿ, ಮಿರ್ಜಿ-ಅಕ್ಕಿಮರಡಿ ಸೇತುವೆಗಳು ಇನ್ನು ಜಲಾವೃತವಾಗಿವೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಬೆಳಗ್ಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಮಿರ್ಜಿ ಸೇತುವೆಯ ಹತ್ತಿರ ನಿರ್ಮಿಸಿದ ಹೊಸ ಸೇತುವೆಯಿಂದ ನೀರು ಕೆಳಮಟ್ಟಕ್ಕೆ ಇಳಿದಿದೆ. ಆದರೆ ಸೇತುವೆಯ ಇಕ್ಕೆಲಗಳಲ್ಲಿ ಹಾಕಿದ್ದ ಗರಸು ಪ್ರವಾಹ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಪರಿಣಾಮ ಹೊಸ ಸೇತುವೆಯ ಮೇಲೆ ಸಂಚಾರ ಸಾಧ್ಯವಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಹಿಡಕಲ್ ಜಲಾಶಯಕ್ಕೆ ಸೋಮವಾರ 24943 ಕ್ಯೂಸೆಕ್ ನೀರಿನ ಒಳಹರಿವು ಇದ್ದು, 51 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯಯುಳ್ಳ ಜಲಾಶಯದಲ್ಲಿ 16.512 ಟಿಎಂಸಿ ನೀರು ಸಂಗ್ರಹ ವಾಗಿದೆ.