ಬಡವರಿಗೆ ತಲಾ 5 ಕೆಜಿ ಜೋಳ ವಿತರಣೆ
Team Udayavani, Apr 30, 2020, 2:39 PM IST
ಬಾಗಲಕೋಟೆ: ನಗರಸಭೆ ಮಾಜಿ ಅಧ್ಯಕ್ಷ, ಎ.ಪಿ.ಎಂ.ಸಿ ವರ್ತಕ ದ್ಯಾವಪ್ಪ ರಾಕುಂಪಿ ಅವರು ಕೊಡಮಾಡಿದ ತಲಾ 5 ಕೆಜಿಯ ಜೋಳದ ಕಿಟ್ ಗಳನ್ನು ನಗರದ ವಾರ್ಡ್ ನಂ.9ರ ವ್ಯಾಪ್ತಿಯ 400 ಜನ ಕಡು ಬಡವರಿಗೆ ಶಾಸಕ ಡಾ|ವೀರಣ್ಣ ಚರಂತಿಮಠ ಬುಧವಾರ ವಿತರಿಸಿದರು.
ಜೋಳದ ಕಿಟ್ ವಿತರಿಸಿ ಮಾತನಾಡಿದ ಅವರು, ಕೋವಿಡ್-19 ಬಗ್ಗೆ ಯಾರು ಹಗುರವಾಗಿ ಭಾವಿಸಬಾರದು. ಸರಕಾರ ಮತ್ತು ಜಿಲ್ಲಾಡಳಿತ ನೀಡಿದ ಆದೇಶಗಳನ್ನು ಪಾಲಿಸಬೇಕು. ಮನೆಯಿಂದ ಅನಾವಶ್ಯಕವಾಗಿ ಯಾರು ಹೊರಗೆ ಬರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ನೆಗಡಿ, ಜ್ವರಗಳು ಬಂದರೆ ತಕ್ಷಣ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿಕೊಳ್ಳಬೇಕು. ನಿರ್ಲಕ್ಷ ವಹಿಸಬಾರದು ಎಂದು ತಿಳಿಸಿದರು.
ವಾರ್ಡ್ನ ಮುಖಂಡರು ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು. ಜನರು ಕೋವಿಡ್ ಬಗ್ಗೆ ಅರಿವು ಮೂಡದಿದ್ದರೆ ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇಲ್ಲಿವರೆಗೆ ಜೀವನ ಮಾಡಿದ್ದು ಬೇರೆ, ಇನ್ನು ಮುಂದೆ ಮಾಡುವುದೇ ಬೇರೆಯಾಗುತ್ತದೆ. ಜಗತ್ತಿನ ತುಂಬೆಲ್ಲ ಕೊರೊನಾ ವೈರಸ್ ಭೀತಿ ಇರುವುದರಿಂದ ಜನ ಬದಲಾವಣೆಯಾಗಬೇಕು. ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಎಪಿಎಂಸಿ ವರ್ತಕ ಮಹೇಶ ಅಂಗಡಿ, ಮೌನೇಶ ಅಂಬಿಗೇರ, ತಿಪ್ಪಣ್ಣ ಅಚನೂರ, ಮಲ್ಲೇಶ ಕುರಕಳ್ಳಿ, ಕಾದರಸಾಬ್ ಗಂಗೂರ, ಭೀಮರಾಯ ಸಗರ, ನಾಗಪ್ಪ ವಡಗೇರ, ಸಾಬಣ್ಣ ಅಂಬಿಗೇರ ಉಪಸ್ಥಿತರಿದ್ದರು.