ಬಡ ಜನರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ
Team Udayavani, Apr 30, 2020, 3:27 PM IST
ಬಾಗಲಕೋಟೆ: ನಗರದ ಕುಷ್ಠ ರೋಗಿಗಳ ಕಾಲೋನಿ ಹಾಗೂ ವಿವಿಧ ಕೊಳಚೆ ಪ್ರದೇಶದ ಬಡ ಜನರಿಗೆ ಜಿಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ವೀಣಾ ಕಾಶಪ್ಪನವರ ಆಹಾರಧಾನ್ಯಗಳ ಕಿಟ್ ವಿತರಿಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಬಡ ಜನರು ದಿನನಿತ್ಯದ ಆಹಾರ ಸಾಮಗ್ರಿಗಾಗಿ ಪರಿತಪಿಸಬಾರದು ಎಂಬ ಉದ್ದೇಶದಿಂದ ನಗರದ ಕುಷ್ಠ ರೋಗಿಗಳ ಕಾಲೋನಿ ಸಹಿತ ವಿವಿಧೆಡೆ ಬಡ ಜನರಿಗೆ ಒಟ್ಟು 100 ಕುಟುಂಬಕ್ಕೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ವಿತರಣೆ ಮಾಡಿದರು.
ಅಕ್ಕಿ, ಗೋಧಿ ಹಿಟ್ಟು, ಅಡುಗೆ ಎಣ್ಣೆ, ಮಸಾಲೆ ಹೀಗೆ ವಿವಿಧ ವಸ್ತುಗಳನ್ನು ವಿತರಿಸಿ, ಕೋವಿಡ್ 19 ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಜನರು ತಮ್ಮ ಹಾಗೂ ತಮ್ಮವರ ಆರೋಗ್ಯದ ಕುರಿತು ಜಾಗೃತಿ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಜತೆಗೆ ಸ್ವತ್ಛತೆ ಕಾಪಾಡಿಕೊಳ್ಳಬೇಕು ಎಂದು ವೀಣಾ ಸಲಹೆ ನೀಡಿದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ರಾಠೊಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ, ನಗರಸಭೆ ಮಾಜಿ ಸದಸ್ಯ ಹನಮಂತ ರಾಕುಂಪಿ, ಪ್ರಮುಖರಾದ ಸಂಗು ಮೇಟಿ, ಸಂತೋಷ ಹಳ್ಳೂರ, ಮಂಜುನಾಥ ಪುರತಗೇರಿ ಉಪಸ್ಥಿತರಿದ್ದರು.