ಧರ್ಮಸ್ಥಳ ಯೋಜನೆಯಿಂದ ಕುಡಿಯುವ ನೀರು ಪೂರೈಕೆ
Team Udayavani, Jun 12, 2019, 9:37 AM IST
ತೇರದಾಳ: ದೇವರಾಜ ನಗರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರಿಗೆ ನೀರು ಪೂರೈಕೆಗೆ ಚಾಲನೆ ನೀಡಲಾಯಿತು.
ತೇರದಾಳ: ನಗರದಲ್ಲಿ ಜೀವಜಲದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ದೇವರಾಜ ನಗರದ ಕೆಲ ಭಾಗದಲ್ಲಿ ವಾರಕ್ಕೆ 4 ಟ್ಯಾಂಕರ್ ನೀರನ್ನು ಉಚಿತವಾಗಿ ನಮ್ಮ ಸಂಸ್ಥೆಯಿಂದ ಪೂರೈಸಲಾಗುವುದು ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ತೇರದಾಳ ವಲಯ ಮೇಲ್ವಿಚಾರಕ ಸಂತೋಷ ಮಾಳಿ ಹೇಳಿದರು.
ಇಲ್ಲಿನ ದೇವರಾಜ ನಗರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸಾರ್ವಜನಿಕರಿಗೆ ನೀರು ಪೂರೈಕೆ ಉದ್ಘಾಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
30 ದಿನಗಳವರೆಗೆ ನೀರು ಪೂರೈಕೆಗೆ ಧರ್ಮಾಧಿಕಾರಿಗಳು ಮಂಜೂರಾತಿ ನೀಡಿದ್ದಾರೆ. ಸಾರ್ವಜನಿಕರು ಸರದಿ ಪ್ರಕಾರ ಕೊಡ ತುಂಬಿಕೊಂಡು ಇದರ ಲಾಭ ಪಡೆಯಬೇಕು ಎಂದರು.
ನೀರು ಪೂರೈಕೆಗೆ ಚಾಲನೆ ನೀಡಿದ ಪುರಸಭೆ ಮಾಜಿ ಸದಸ್ಯರಾದ ರಾಜೇಸಾಬ ನಗಾರ್ಜಿ, ಮುರಗೇಶ ಮಿರ್ಜಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ದೊರಕುತ್ತಿವೆ ಎಂದು ಹೇಳಿದರು.
ಟ್ರಸ್ಟ್ ಕೃಷಿಯಂತ್ರಧಾರೆಯ ಪ್ರಬಂಧಕ ರಾಜು ಬೆಟಗೇರಿ, ಮಹೇಶ ಕುಂಚಕನೂರ, ವಿನಾಯಕ ಗಾಡಿವಡ್ಡರ, ಕುಮಾರ ಗುರವ, ಪ್ರಕಾಶ ಮಾಲಗಾವಿ, ಶಿವಪ್ಪ ಯಾದವಾಡ, ಶಿವಾನಂದ ಕೋಷ್ಠಿ, ಶಂಕರ ಅರಭಾವಿ ಅನೇಕರಿದ್ದರು.