ಬರ ಸಮಸ್ಯೆ; ಅಧ್ಯಯನ ಸಮಿತಿಗೆ ಒತ್ತಾಯ
Team Udayavani, May 12, 2019, 2:52 PM IST
ಬಾಗಲಕೋಟೆ: ಜಿಲ್ಲೆಯ ಬರ ಸಮಸ್ಯೆ ತೀವ್ರವಾಗಿದೆ. ಬರದಿಂದ ಜನರು ಗುಳೇ ಹೋಗುತ್ತಿದ್ದಾರೆ. ಆದರೆ, ಅಧಿಕಾರಿಗಳು, ಬರ ಸಮಸ್ಯೆ ಕುರಿತು ಗ್ರಾಮೀಣ ಭಾಗದಲ್ಲಿ ಸಂಚರಿಸಿ, ಅರಿತುಕೊಳ್ಳದೇ, ಯಾವ ಸಮಸ್ಯೆಯೂ ಇಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಜಿಲ್ಲೆಯ ಬರ ನಿರ್ವಹಣೆ ಹಾಗೂ ಬರ ಸಮಸ್ಯೆ ಅರಿಯಲು ಜಿಲ್ಲಾಡಳಿತ ಕೂಡಲೇ ಸಮಿತಿ ರಚನೆ ಮಾಡಬೇಕು ಎಂದು ರೈತ ಮುಖಂಡ ಸಿದ್ದು ತೇಜಿ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದ ಜನ- ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಮೇವು ಇಲ್ಲದೇ ರೈತರು, ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಆದರೂ, ಜಿಲ್ಲಾಡಳಿತ ನೀರು, ಮೇವಿನ ಸಮಸ್ಯೆ ಇಲ್ಲ ಎಂದು ಹೇಳುತ್ತಿದೆ. ಗ್ರಾಮೀಣ ಭಾಗದಲ್ಲಿ ಬರದಿಂದ ಆಗುತ್ತಿರುವ ವಾಸ್ತವ ಸಮಸ್ಯೆಯನ್ನು ಅರಿತು, ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಜನ, ಜಾನುವಾರುಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಾನುವಾರುಗಳಿಗೆ ಮೇವು ವ್ಯವಸ್ಥೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಜನರು ಗುಳೆ ಹೋಗುವುದನ್ನು ತಪ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದರು.
ಜಿಲ್ಲಾಡಳಿತ ಕೂಡಲೆ ಅಧ್ಯಯನ ಸಮಿತಿ ರಚನೆ ಮಾಡಿ ಜಿಲ್ಲೆಯಲ್ಲಿನ ಯಾವ ಗ್ರಾಮಗಳಲ್ಲಿ ಕುಡಿಯುವ ನೀರು, ಮೇವು ಕೊರತೆ ಇದೆ ಎನ್ನುವು ಕುರಿತು ಅಧ್ಯಯನ ನಡೆಸಬೇಕು. ಸಮಸ್ಯೆ ಇರುವ ಕಡೆ ತಕ್ಷಣಕ್ಕೆ ಸ್ಪಂದಿಸಬೇಕು. ವಾರದಲ್ಲಿ ಸಮಸ್ಯೆ ಪರಿಹರಿಸದೇ ಹೋದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರೈತ ಸಂಘದ ಮುಖಂಡರಾದ ಬಸವರಾಜ ಮನ್ನಿ, ರಾಮಣ್ಣ ಸುನಗದ, ಸಂದೇಶ ಕುಮಾರ ಮುಂತಾದವರು ಉಪಸ್ಥಿತರಿದ್ದರು.