ಉದ್ದಿಮೆ ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ನಿಷ್ಠೆಯೊಂದಿದ್ದರೆ ಪ್ರತಿಯೊಂದು ಕಾರ್ಯ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ
Team Udayavani, Feb 18, 2022, 5:44 PM IST
ಮಹಾಲಿಂಗಪುರ: ಗ್ರಾಮೀಣ ಭಾಗದಲ್ಲಿ ಉದ್ದಿಮೆ ಸ್ಥಾಪಿಸುವುದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಿ ದೇಶದ ಆರ್ಥಿಕತೆಗೆ ಸಹಾಯಕವಾಗಲಿದೆ ಎಂದು ಜಮಖಂಡಿ ಓಲೆಮಠದ ಡಾ| ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.
ಚಿಮ್ಮಡ ಮಡ್ಡಿ ಪ್ರಭುಲಿಂಗೇಶ್ವರ ದೇವಸ್ಥಾನದ ಹತ್ತಿರ ಸುಯೋಗಪೂಜಾರಿ ಸಂಸ್ಥೆಯಿಂದ ನಿರ್ಮಿಸಲಾದ ನೂತನ ಕೈಗಾರಿಕಾ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಛಲ, ನಿಷ್ಠೆಯೊಂದಿದ್ದರೆ ಪ್ರತಿಯೊಂದು ಕಾರ್ಯ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಪೊರೇಟ್ ಟ್ರೇನರ್ ಮಹೇಶ ಮಾಶಾಳ ಮಾತನಾಡಿ, ಉದ್ಯಮಿಗಳು ತಮ್ಮ ಲಾಭ ಮಾತ್ರ ಪರಿಗಣಿಸದೆ ಸೇವಾ ಮನೋಭಾವ ಹೊಂದಿರಬೇಕು. ಈ ಭಾಗದ ಜನರ ಜೀವನಾಡಿಯಂತೆ ಕಾರ್ಯ ನಿರ್ವಹಿಸಿದಲ್ಲಿ ಉದ್ಯಮ ಗುರಿ ತಲುಪಿದಂತೆಯೇ ಎಂದರು. ಹಂದಿಗುಂದ ಅಡವಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಕೊಣ್ಣೂರ ಹೊರಗಿನ ಮಠದ ಡಾ| ವಿಶ್ವಪ್ರಭು ಶಿವಾಚಾರ್ಯ ಸ್ವಾಮಿಗಳು, ಚಿಮ್ಮಡ ವಿತಕ್ತಮಠದ ಪ್ರಭು ಸ್ವಾಮೀಜಿ, ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ದನ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯ ಪರಶುರಾಮ ಬಸವ್ವಗೋಳ, ಮಹಾಲಿಂಗಪುರ ಪುರಸಭೆ ಅಧ್ಯಕ್ಷೆ ಸ್ನೇಹಲ್ ಅಂಗಡಿ, ಡಾ| ವಸಂತ ಮಮದಾಪುರ, ಗ್ರಾಪಂ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಸಂಸ್ಥೆಯ ಪುಂಡಲಿಕಪ್ಪ ಪೂಜಾರಿ, ಶಿವಲಿಂಗಪ್ಪ ಪಾಟೀಲ, ರಾಮಣ್ಣ ಮುಗಳಖೋಡ ಇದ್ದರು.