ಜನರ ರಕ್ತ ಹೀರುತ್ತಿದೆ ಕೇಂದ್ರ ಸರ್ಕಾರ
Team Udayavani, Jun 13, 2021, 4:58 PM IST
ಬನಹಟ್ಟಿ: ತೈಲ ಬೆಲೆ ಹಾಗೂ ಅದರ ಉತ್ಪನ್ನಗಳ ಬೆಲೆಗಳ ಏರಿಕೆಯಿಂದಾಗಿ ದೇಶದ ರೈತರು, ವ್ಯಾಪಾರಸ್ಥರು ಕೂಲಿ, ಕಾರ್ಮಿಕರು ದಾರುಣ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಇವರೆಲ್ಲರ ಮೇಲೆ ಕಾಳಜಿ ಇಲ್ಲ. ಕೇಂದ್ರ ಸರ್ಕಾರದವರು ಸೇವಕರಲ್ಲ, ಅವರು ವ್ಯಾಪಾರಿಗಳು. ಅವರು ಜನರ ರಕ್ತ ಹೀರುವ ಕಾರ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಆದೇಶದ ಮೇರೆಗೆ ತೈಲ ಬೆಲೆಗಳ ಉತ್ಪನ್ನಗಳ ಬೆಲೆಯ ಹೆಚ್ಚಳ ಖಂಡಿಸಿ ಜೂ.13 ರಂದು ಜಿಪಂ ವ್ಯಾಪ್ತಿಯಲ್ಲಿ ಹಾಗೂ 14 ರಂದು ಪ್ರತಿಯೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೆಟ್ರೊಲ್ ಬಂಕ್ಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಒಂದು ಬ್ಯಾರಲ್ಗೆ 109 ಡಾಲರ್ ಇತ್ತು. ದೇಶದಲ್ಲಿ ಪೆಟ್ರೊಲ್ ಬೆಲೆ ಕಡಿಮೆ ಇತ್ತು. ಇಂದು 70 ಡಾಲರ್ ಇದೆ. ಆದರೆ ಭಾರತದಲ್ಲಿ ಪೆಟ್ರೊಲ್ ಬೆಲೆ ರೂ.100 ಕ್ಕೆ ಬಂದು ನಿಂತಿದೆ. ತೈಲ ಬೆಲೆಯ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರ ಜನರಿಗೆ ಅನ್ಯಾಯ, ಮೋಸ ಹಾಗೂ ದೇಶದ್ರೋಹದ ಕಾರ್ಯ ಮಾಡುತ್ತಿದೆ. ಕೋವಿಡ್ನಿಂದಾಗಿ ಜನರು ತೊಂದರೆಯಲ್ಲಿದ್ದಾಗ ತೈಲ ಬೆಲೆ ಹೆಚ್ಚಳ ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ. ಕೇಂದ್ರ ಸರ್ಕಾರ ಅದಷ್ಟು ಬೇಗನೆ ತೈಲ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಬೇಕು ಎಂಬುದು ಕಾಂಗ್ರೆಸ್ ಆಗ್ರಹಪಡಿಸಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ನೀಲಕಂಠ ಮುತ್ತೂರ, ರಾಜೇಂದ್ರ ಭದ್ರನವರ, ಬಸವರಾಜ ಕೊಕಟನೂರ, ಈರಯ್ಯ ಮಠಪತಿ, ಅಶೋಕ ಉಳ್ಳಾಗಡ್ಡಿ, ಶಿವಕುಮಾರ ಪಾಟೀಲ, ದುಂಡಪ್ಪ ಮಾಸ್ಟರ್, ಭರಮು ಉಳ್ಳಾಗಡ್ಡಿ, ಹಾರೂನ್ ಸಾಂಗ್ಲಿಕರ್, ಹಾರೂನ್ ಬೇವೂರ, ರಾಹುಲ್ ಕಲಾಲ, ಕಿರಣ ಕರಲಟ್ಟಿ, ಬಸವರಾಜ ಗುಡೋಡಗಿ ಸೇರಿದಂತೆ ತೇರದಾಳ ಮತಕ್ಷೇತ್ರದ ವಿವಿಧ ನಗರ ಮತ್ತು ಗ್ರಾಮೀಣ ಪ್ರದೇಶದ ಕಾರ್ಯಕರ್ತರು ಇದ್ದರು.