ಕಾರ್ಖಾನೆ ಮಾಲೀಕರ ತಾರತಮ್ಯ-ಆಕ್ರೋಶ
Team Udayavani, Nov 20, 2019, 12:38 PM IST
ಜಮಖಂಡಿ: ಜಿಲ್ಲೆಯ ಎಲ್ಲ ಸಕ್ಕರೆ ಕಾರಖಾನೆಗಳ ಮಾಲೀಕರು ಎಫ್ಆರ್ಪಿ ಆಧಾರದ ಮೇಲೆ ಕಬ್ಬಿಗೆ ದರ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ರೈತರಲ್ಲಿ ಆಕ್ರೋಶ ಭಾವನೆಗಳು ಹೆಚ್ಚಾಗುತ್ತಿವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.
ನಗರದ ಮಿನಿ ವಿಧಾನಸೌಧ ಕಚೇರಿ ಎದುರು ಮಂಗಳವಾರ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ತಾಲೂಕು ಕಬ್ಬು ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯ ಕಾರಖಾನೆ ಮಾಲೀಕರು ಎಫ್ಆರ್ಪಿ ದರ ನಿಗದಿ ಮಾಡಿ ಒಂದು ಟನ್ ಕಬ್ಬಿಗೆ ಎಚ್ಎನ್ಟಿ ಎಂದು 700 ಕಡಿತಗೊಳಿಸಿ ರೈತರಿಗೆ ಕೇವಲ 2300 ರಿಂದ 2500 ರೂ. ನೀಡುವುದಕ್ಕೆ ರೈತ ಸಂಘ ಒಪ್ಪಿಗೆ ಸೂಚಿಸಿಲ್ಲ. ಕನಿಷ್ಠ ಟನ್ ಕಬ್ಬಿಗೆ 3500 ದರ ನಿಗದಿಗೊಳಿಸಿ ರೈತರ ಖಾತೆಗೆ ನೇರವಾಗಿ ಜಮೆ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಎಸ್ಎಪಿ ಕಮೀಟಿ ರಚನೆಯಾಗಬೇಕು. ಎಸ್ ಎಪಿ ಕಾಯ್ದೆ ಪ್ರಕಾರ ಸಕ್ಕರೆ ಕಾರಖಾನೆಯಲ್ಲಿ ಉತ್ಪಾದನೆಗೊಳ್ಳುವ ಉಪಉತ್ಪನ್ನಗಳ ಲಾಭದಲ್ಲಿ ಶೇ. 70 ರೈತರಿಗೆ ಮತ್ತು ಶೇ. 30 ಆದಾಯ ಲಭಿಸಬೇಕು. ಎಸ್ಎಪಿ ಕಾಯ್ದೆ ರೈತರಿಗೆ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಕಾರಖಾನೆ ನೀಡಬೇಕು. ರೈತರು ಹೋರಾಟ ಮಾಡಿ ಹಕ್ಕುಗಳನ್ನು ಪಡೆಯುವ ಬದಲಾಗಿ, ಕಾಯ್ದೆಯಲ್ಲಿರುವ ಸೌಲಭ್ಯಗಳನ್ನು ರೈತರಿಗೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಕಲ್ಲಪ್ಪ ಬಿರಾದಾರ, ಬಾಬು ಹಸರಡ್ಡಿ, ರಾಜು ನದಾಫ, ಈಶ್ವರಯ್ಯಪೂಜಾರಿ, ಸಿದ್ದು ಬನಜನವರ, ಸಿದ್ದು ಉಳ್ಳಾಗಡ್ಡಿ, ಶಿವಲಿಂಗಪ್ಪ ತುಬಚಿ, ಕಲ್ಲಪ್ಪ ಬಳಗಾರ, ಬಸು ಮಲೋಡಿ, ಅವಧೂತ ಒಡೆಯರ, ಮಾಯಪ್ಪ ತರಾದಿ, ಭೀಮಸಿ ಬೆಳಗಲಿ, ಕಾಡಪ್ಪ ದೇಸಾಯಿ, ಶ್ರೀಶೈಲ ಭೂಮಾರ, ಶಿವಾನಂದ ಮಲೋಡಿ ಪಾಲ್ಗೊಂಡಿದ್ದರು. ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ರೈತ ಸಂಘದಿಂದ ಪ್ತತಿಭಟನೆ ನಡೆದು ಮಿನಿ ವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಯಿತು. ಬಳಿಕ ರೈತರು ತಹಶೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.