ನರೇಗಾದಿಂದ ಗ್ರಾಮೀಣರಿಗೆ ಆರ್ಥಿಕ ನೆರವು: ಸಂತೋಷ
ಕೂಲಿ ಕಾರ್ಮಿಕರು ಇ-ಶ್ರಮ ಕಾರ್ಡ್ ಹೊಂದಬೇಕು
Team Udayavani, Feb 5, 2022, 5:33 PM IST
ಬಾದಾಮಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕವಾಗಿ ನೆರವಾಗಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಸಂತೋಷ ಕುರಿ ಹೇಳಿದರು.
ಕೆಂದೂರಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿ ನರೇಗಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 16 ವರ್ಷಗಳಿಂದ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರನ್ನು ಕೈಹಿಡಿದಿದೆ. ಗ್ರಾಮೀಣ ಜನರ ಭಾಗವಹಿಸುವಿಕೆ, ಸಹಕಾರದಿಂದ ಯೋಜನೆಯು ಅಭಿವೃದ್ಧಿಯ ನಾಗಾಲೋಟ ಮುಂದುವರಿಸಿದೆ.
ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ. 50ರಷ್ಟು ರಿಯಾಯಿತಿ ಇದ್ದು, ಲಾಭ ಹೊಂದಬೇಕೆಂದು ಕರೆ ನೀಡಿದರು. ಕೂಲಿಕಾರರ ಹಕ್ಕುಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಿಡಿಒ ಸುನಿತಾ ಅಂಗಡಿ ಮಾತನಾಡಿ, ನರೇಗಾ ಅಡಿ ವೈಯಕ್ತಿಕ ಹಾಗೂ ಸಮುದಾಯದ ಕಾಮಗಾರಿಗಳಿದ್ದು, ಗ್ರಾಮೀಣ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಹೇಳಿದರು.
ಐಇಸಿ ಸಂಯೋಜಕ ಸಮೀರ ಉಮರ್ಜಿ ಮಾತನಾಡಿ, ಕೂಲಿ ಕಾರ್ಮಿಕರು ಇ-ಶ್ರಮ ಕಾರ್ಡ್ ಹೊಂದಬೇಕು ಎಂದರು. ಗ್ರಾಮ ಕಾಯಕ ಮಿತ್ರ ಸುಧಾ ಬಡಿಗೇರ, ತಾಂಡಾ ರೋಜಗಾರ ಮಿತ್ರ ಪವಿತ್ರಾ ದೊಡಮನಿ, ಮಂಜುನಾಥ ಕಾಲಗಗ್ಗರಿ, ಹಣಮಂತ ಪಟ್ಟದಕಲ್ಲ ಭಾಗವಹಿಸಿದ್ದರು.