ಲಾಠಿ ಹಿಡಿದ ತಹಶೀಲ್ದಾರ್ ಶ್ವೇತಾ!
ಸವಾರರಿಗೆ ದಂಡ ವಿಧಿಸಿ ಕೋವಿಡ್ ಜಾಗೃತಿ
Team Udayavani, Jun 17, 2021, 5:07 PM IST
ಹುನಗುಂದ: ಮಾಸ್ಕ್ ಇಲ್ಲದೇ ಬೇಕಾಬಿಟ್ಟಿಯಾಗಿ ತಿರಗಾಡುತ್ತಿದ್ದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತಹಶೀಲ್ದಾರ್ ಶ್ವೇತಾ ಬಿಡಿಕರ ಲಾಠಿ ರುಚಿ ತೋರಿಸಿ ಕೊರೊನಾ ಜಾಗೃತಿ ಮೂಡಿಸಿದರು.
ಬುಧವಾರ ಬೆಳಂಬೆಳಗ್ಗೆ ತಹಶೀಲ್ದಾರರು ಕೈಯಲ್ಲಿ ಲಾಠಿ ಹಿಡಿದು ಜಿಟಿಜಿಟಿ ಮಳೆಯಲ್ಲಿಯೇ ರಸ್ತೆಗೀಳಿದರು. ವಿ.ಮ.ಸರ್ಕಲ್,ಬಸ್ ನಿಲ್ದಾಣ ಮುಂಭಾಗದಲ್ಲಿ ಮಾಸ್ಕ್ ಹಾಕಿಕೊಳ್ಳದೇ ತಿರಗಾಡುವ ದ್ವಿ ಚಕ್ರ ಮತ್ತು ಟಂಟಂ ಹಾಗೂ ಕಾರುಗಳನ್ನು ತಡೆದು ದಂಡ ವಿಧಿ ಸಿದರು. ಕೊರೊನಾ ಸೋಂಕಿನ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದ್ದು, ರಾಜ್ಯ ಸರ್ಕಾರ ಕೆಲವೊಂದು ನಿರ್ಬಂಧ ಏರಿ ಅನ್ಲಾಕ್ ಮಾಡಿದೆ. ಜನರು ಮಾತ್ರ ಕೊರೊನಾ ಭಯವಿಲ್ಲದೇ ಮಾಸ್ಕ್ ಇಲ್ಲದೇ ಸುತ್ತಾಡುತ್ತಿದ್ದು ಇದನ್ನು ಗಮನಸಿದ ಅ ಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ದಂಡ ವಿಧಿಸಿದ್ದಾರೆ.
ತಹಶೀಲ್ದಾರರು ಕಾರ್ಯಾಚರಣೆ ನಡೆಸುತ್ತಿರುವ ವಿಷಯ ತಿಳಿದ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಮತ್ತು ಪುರಸಭೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ನಂತರ ಅವರು ಸಹ ಮಾಸ್ಕ್ ಇಲ್ಲದೆ ಓಡಾಡುವ ವಾಹನ ಸವಾರರಿಗೆ ದಂಡ ವಿ ಧಿಸುವ ಕಾರ್ಯದಲ್ಲಿ ಮಗ್ನರಾದರು. ಈ ವೇಳೆ ಪಿಎಸ್ಐ ಶರಣಬಸಪ್ಪ ಸಂಗಳದ, ಪ್ರಬಾರಿ ಪಿಎಸ್ಐ ಅಶೋಕ ಸೇರಿದಂತೆ ಪೊಲೀಸ್ ಮತ್ತು ಪುರಸಭೆ ಸಿಬ್ಬಂದಿ ಇದ್ದರು.