ಸಿದ್ಧಾರೂಢರು ಜಾತಿ-ಮತ-ಪಂಥ ಮೀರಿ ನಿಂತ ಜಗದ್ಗುರು
Team Udayavani, Apr 12, 2022, 5:19 PM IST
ಮಹಾಲಿಂಗಪುರ: ರಾಮನವಮಿಯಂದು ಜನ್ಮತಾಳಿದ ಸಿದ್ಧಾರೂಢರು ಜಾತಿ-ಮತ- ಪಂಥಗಳನ್ನು ಮೀರಿನಿಂತ ನಿಜವಾದ ಜಗದ್ಗುರುಗಳು ಎಂದು ಕಾಡರಕೊಪ್ಪದ ನ್ಯಾಯವೇದಾಂತಾಚಾರ್ಯ ದಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಜರುಗಿದ ಜಗದ್ಗುರು ಸಿದ್ಧಾರೂಢರ 186ನೇ ಜಯಂತಿಯ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಗೀತೆಯಲ್ಲಿ ಪರಮಾತ್ಮ ಹೇಳಿದಂತೆ ಭೂಮಿ ಮೇಲೆ ಅಧರ್ಮ ಹೆಚ್ಚಾದಾಗ ಭಗವಂತ ಸಾಧು-ಸಂತರ ಮಹಾನ್ ಪುರುಷರ ರೂಪದಲ್ಲಿ ಜನ್ಮ ತಾಳಿ ಮನುಕುಲವನ್ನು ಉದ್ಧರಿಸುತ್ತಾನೆ. ಅಂತೆಯೆ ಮನುಕುಲದ ಉದ್ಧಾರಕ್ಕಾಗಿ ಜನ್ಮ ತಾಳಿದ ರಾಮಚಂದ್ರರಂತೆ, ಹುಬ್ಬಳ್ಳಿಯ ಸಿದ್ಧಾರೂಢರು, ಶಿರಡಿ ಸಾಯಿಬಾಬಾರು ಜನ್ಮ ತಾಳಿರುವ ರಾಮನವಮಿ ದಿನವು ತ್ರಿವಳಿ ಸಂಗಮದ ಪುಣ್ಯ ದಿನವಾಗಿದೆ.
ಮಹಾತ್ಮರ ತತ್ವ, ಚಿಂತನೆ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ದಿನಾಚರಣೆಗಳು ಸಾರ್ಥಕ ಪಡೆಯುತ್ತವೆ. ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವು ರಕ್ಷಿಸುತ್ತದೆ, ಮಾನವ ಜನ್ಮವನ್ನು ವ್ಯರ್ಥ ಕಾಲ ಹರಣದಲ್ಲಿ ಕಳೆಯದೇ, ನಿತ್ಯ ಜಪ, ತಪ, ದಾನ, ಧರ್ಮ,ದಾಸೋಹ, ಅಧ್ಯಾತ್ಮ ಚಿಂತನೆಗಳ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಜಾನಂದ ಸ್ವಾಮಿಜಿ, ಮಂದ್ರೂಪದ ರಾಮಚಂದ್ರಣ್ಣ ಶಾಸ್ತ್ರಿಗಳು ಮಾತನಾಡಿ ಜಗದ್ಗುರು ಸಿದ್ಧಾರೂಢರು ಓಂ ನಮಃ ಶಿವಾಯ ಎಂಬ ಮಹಾಮಂತ್ರವನ್ನು ಬಹಿರಂಗವಾಗಿ ಸಾರ್ವತ್ರಿಕರಣಗೊಳಿಸಿ ಮುಮುಕ್ಷುಗಳ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಮನ್ನಿಜಗುಣರ ಶಾಸ್ತ್ರಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದ ಆರೂಢರು ನಾಡಿನ ಆಧ್ಯಾತ್ಮ ಕ್ಷೇತ್ರಕ್ಕೆ ಮಹದುಪಕಾರಗೆ„ದು ಭಕ್ತರ ಕಾಮಧೇನು ಕಲ್ಪವೃಕ್ಷವಾಗಿ ಬೆಳಗುತ್ತಿದ್ದಾರೆ. ಮಾನವರು ಧರ್ಮ ಮಾರ್ಗದಲ್ಲಿ ನಡೆದು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಚಿಕ್ಕಪಡಸಲಗಿಯ ಮಾತೋಶ್ರೀ ಅಕ್ಕಮಹಾದೇವಿತಾಯಿ, ಮಲ್ಲೇಶಪ್ಪ ಕಟಗಿ ಶರಣರು, ಬಾಲಪ್ರತಿಭೆ ಅದ್ವೀತಾ ಮ. ಬಡಿಗೇರ ಸಿದ್ದಾರೂಢರ ಪವಾಡ ಮತ್ತು ಚರಿತ್ರೆಗಳನ್ನು ತಿಳಿಸಿದರು. ಶಿರನಾಳದ ಚನ್ನಯ್ಯ ಸ್ವಾಮಿಗಳು, ರನ್ನಬೆಳಗಲಿಯ ಸದಾಶಿವ ಗುರೂಜಿ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಿಂದ ಹಮ್ಮಿಕೊಂಡಿದ್ದ ಲಿಖೀತ ಕೋಟಿಜಪಯಜ್ಞ ಕಾರ್ಯಕ್ರಮದಲ್ಲಿ ಅತಿಹೆಚ್ಚು ಜಪಗಳನ್ನು ಬರೆದ ಶಿರನಾಳ ಗ್ರಾಮದ 21 ಸದ್ಭಕ್ತರನ್ನು ಹಾಗೂ ಕೋಟಿ ಜಪಯಜ್ಞ ಮಹಾಪೋಷಕರಾದ ಯಕಬಾದ ನಿವೃತ್ತ ಶಿಕ್ಷಕರಾದ ಎಸ್.ಬಿ.ಪಾಟೀಲ ದಂಪತಿಯನ್ನು ಸನ್ಮಾನಿಸಲಾಯಿತು.
ಮುತ್ತೈದೆಯರು ತೊಟ್ಟಿಲು ತೂಗಿ ಸಿದ್ಧಾರೂಢರ ನಾಮಕರಣ ಮಹೋತ್ಸವ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎರಡನೇ ವರ್ಷದ ಲಿಖೀತ ಕೋಟಿ ಜಪಯಜ್ಞದ ಓಂ ನಮಃ ಶಿವಾಯ ಮಹಾಮಂತ್ರದ ಪುಸ್ತಕವನ್ನು ದಯಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಸಿದ್ದಾರೂಢ ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ಡಾ|ಬಿ.ಡಿ ಸೋರಗಾಂವಿ, ಕಾರ್ಯದರ್ಶಿ ಚಂದ್ರಶೇಖರ ಮೋರೆ, ಧರ್ಮದರ್ಶಿಗಳಾದ ಮಲ್ಲಪ್ಪ ಭಾಂವಿಕಟ್ಟಿ, ಚೇತನ ಹಾದಿಮನಿ, ಗೋಲೇಶ ಅಮ್ಮಣಗಿ, ಲಕ್ಕಪ್ಪ ಚಮಕೇರಿ ಹಾಗೂ ಸದ್ಭಕ್ತರಾದ ಚನಬಸು ಹುರಕಡ್ಲಿ, ಎಸ್.ಕೆ.ಗಿಂಡೆ, ಮಹೇಶ ಬಡಿಗೇರ, ಮಲ್ಲಪ್ಪ ಯಾದವಾಡ, ಮಹಾಲಿಂಗ ಕರೆಹೊನ್ನ, ಹನಮಂತ ಮೀರಾಪಟ್ಟಿ, ಶಿವಲಿಂಗ ತೇಲಿ, ಚಂದ್ರು ಕದ್ದಿಮನಿ, ಸಿದ್ದು ದಢೂತಿ, ಸುಭಾಸ ನಾಯಕ, ಶಂಕರಗೌಡ ಪಾಟೀಲ, ಸದಾಶಿವ ಇಂಗಳಗಿ, ಸುರೇಶ ಕೆಂಪವಾಡ, ಕಲ್ಮೇಶ ಕುಂಬಾರ, ಹಣಮಂತ ಗುರವ ಭಾಗವಹಿಸಿದ್ದರು.