ಕಳಪೆ ಗುಣಮಟ್ಟದ ಕಾಮಗಾರಿ: ಆಕ್ರೋಶ
Team Udayavani, May 15, 2019, 11:23 AM IST
ಹುನಗುಂದ: ತಾಲೂಕಿನ ಅಡಿಹಾಳ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿ.
ಹುನಗುಂದ: ತಾಲೂಕಿನ ಅಡಿಹಾಳ ಗ್ರಾಮದ ಪುನರ ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಚರಂಡಿ ರಸ್ತೆ ಸೇರಿದಂತೆ ಅನೇಕ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಪುನರ್ವಸತಿ ಮತ್ತು ಪುನರ್ನಿರ್ಮಾಣದ ಆಯುಕ್ತರು ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸಂತ್ರಸ್ತರಾದ ಅಡಿಹಾಳ ಗ್ರಾಮದ ರಾಜು ಚಲವಾದಿ, ಬಸವರಾಜ ಚಲವಾದಿ ಹಾಗೂ ಅಮರೇಶ ಅಡಿಹಾಳ ಒತ್ತಾಯಿಸಿದರು.
ಸಂತ್ರಸ್ತ ಅಮರೇಶ ಅಡಿಹಾಳ ಮಾತನಾಡಿ, 2009ರಲ್ಲಿ ಜಲಪ್ರಳಯ ಮತ್ತು ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಬಾಧಿತಗೊಂಡು ಅಡಿಹಾಳ ಗ್ರಾಮದ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತಹ ಸಂತ್ರಸ್ತರಿಗೆ ಸರ್ಕಾರ ಕೋಟಿ ಕೋಟಿ ಅನುದಾನ ಬಿಡುಗಡೆಗೊಳಿಸಿ ಸುಭದ್ರವಾದ ಪುರ ವಸತಿ ಮತ್ತು ಪುನರ ನಿರ್ಮಾಣ ಕಾರ್ಯಕ್ಕೆ ಮುಂದಾದರೆ, ಇಂಜನಿಯರ್ಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರರು ಹಣ ಕೊಳ್ಳೆ ಹೊಡೆಯುವ ಉದ್ಧೇಶದಿಂದ ಕಳಪೆ ಮಟ್ಟದ ಕಾಮಗಾರಿ ಮಾಡಿ ಸರ್ಕಾರದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಡಿಹಾಳ ಪುನರ್ವಸತಿ ಕೇಂದ್ರದಲ್ಲಿ ಸುಮಾರು 6ಕಿ.ಮೀ. ಚರಂಡಿ ಕಾಮಗಾರಿ ಮೂರು ಜನ ಗುತ್ತಿಗೆದಾರರಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ 2 ಕೋಟಿ ರೂ. ಅನುದಾನ ಚರಂಡಿ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಕಾಮಗಾರಿಗೆ ಬಳಸಿದ ಸಾಮಗ್ರಿಗಳು ಕಳಪೆಯಿಂದ ಕೂಡಿದೆ ಎಂದು ಸಂತ್ರಸ್ತರು ಆರೋಪಿಸಿದರು.
ಕಳಪೆ ಮಟ್ಟದಿಂದ ಕೂಡಿದ ಚರಂಡಿ ಕಾಮಗಾರಿಯನ್ನು ಯುಕೆಪಿಯ ಎಇಇ ಡಿ.ಸಿ. ಮಸಿ ಭೇಟಿ ನೀಡಿ ವೀಕ್ಷಿಸಿ ಸ್ವಲ್ಪ ಪ್ರಮಾಣದಲ್ಲಿ ಕಳಪೆಯಾಗಿದೆ. ಸರಿಯಾದ ಕ್ಯೂರಿಂಗ್ ಆಗದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸ್ಥಳದಲ್ಲಿಯೇ ಗುತ್ತಿಗೆದಾರರನ್ನು ತರಾಟೆಗೆ ತಗೆದುಕೊಂಡಂತೆ ನಟಿಸಿದರು. ಇದರಿಂದ ಗ್ರಾಮಸ್ಥರು ಆಕ್ರೋಶಗೊಂಡರು. ಚರಂಡಿ ಕಾಮಗಾರಿಗೆ ಬಳಸಿದ ಸಾಮಗ್ರಿಯ ಬಗ್ಗೆ ಗ್ರಾಮಸ್ಥರು ಎಇಇ ಇಂಜಿನಿಯರ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಚಡಪಡಿಸಿದರು. ನಂತರ ಕಾಮಗಾರಿಯನ್ನು ಪುನರ ವಸತಿ ಮತ್ತು ಪುನರ ನಿರ್ಮಾಣದ ಆಯುಕ್ತರ ಬಂದು ತನಿಖೆ ಮಾಡುವರೆಗೂ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.