ಕಾಲೇಜ್ ಆರಂಭಗೊಂಡು ಆರು ತಿಂಗಳಾದ್ರೂ ಸಿಗದ ಸಂಯೋಜನೆ
Team Udayavani, Oct 20, 2019, 11:43 AM IST
ಗುಳೇದಗುಡ್ಡ: ಪಟ್ಟಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ ಆರು ತಿಂಗಳು ಕಳೆದರೂ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಇದುವರೆಗೂ ಸಂಯೋಜನೆ ನೀಡಿರಲಿಲ್ಲ. ಅಷ್ಟೇ ಅಲ್ಲ ಪರೀಕ್ಷಾ ಅರ್ಜಿ ತುಂಬುವ ನೋಂದಣಿ ಸಂಖ್ಯೆಯನ್ನೂ ನೀಡಿರಲಿಲ್ಲ.
ಹೀಗಾಗಿ ಪರೀಕ್ಷಾ ಅರ್ಜಿ ತುಂಬಲು ಅ.21 ಕೊನೆಯ ದಿನವಾಗಿದ್ದರಿಂದ 67ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಡೆಗೂ ಶನಿವಾರ ಪರೀಕ್ಷಾ ನೋಂದಣಿ ಸಂಖ್ಯೆ ನೀಡಿದ್ದರಿಂದ ವಿದ್ಯಾರ್ಥಿಗಳಲ್ಲಿದ್ದ ಆತಂಕ ದೂರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಒತ್ತಡದಿಂದ ಪಟ್ಟಣಕ್ಕೆ ಕಾಲೇಜ್ ಮಂಜೂರಾಗಿದೆ.
ಶನಿವಾರ ಬೆಳಗ್ಗೆ ಸ್ವತಃ ಸಿದ್ದರಾಮಯ್ಯನವರೇ ಅಧಿ ಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾತನಾಡಿದ್ದರಿಂದ ಬೆಳಗ್ಗೆ 11 ಗಂಟೆ ನಂತರ ನೋಂದಣಿ ಸಂಖ್ಯೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಅರ್ಜಿ ತುಂಬುವ ಆತಂಕ ದೂರಾಗಿದೆ. ಆದರೆ ಕಾಲೇಜಿಗೆ ಇನ್ನೂ ಸಂಯೋಜನೆ ಪತ್ರ ಸಿಕ್ಕಿಲ್ಲ.