ಪ್ರತಿದಿನ 32 ಜನರ ಆಧಾರ್ ನೋಂದಣಿ ಮಾಡಿ
• ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ-ಪರಿಶೀಲನೆ
Team Udayavani, Jun 20, 2019, 9:49 AM IST
ಬನಹಟ್ಟಿ: ರಬಕವಿ ವಿದ್ಯಾನಗರ ಬಡಾವಣೆಯ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಯೋಜನಾಧಿಕಾರಿ ವಿಜಯ ಮೆಕ್ಕಳಕಿ ಭೇಟಿ ನೀಡಿದ್ದರು.
ಬನಹಟ್ಟಿ; ರಬಕವಿ ವಿದ್ಯಾನಗರ ಬಡಾವಣೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿ ದಿನಕ್ಕೆ 32 ಜನರ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸಿಬ್ಬಂದಿಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ವಿದ್ಯಾನಗರ ಬಡಾವಣೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಆಧಾರ್ ಕೇಂದ್ರ ಪರಿಶೀಲಿಸಿ ಮಾತನಾಡಿದ ಅವರು, ಪ್ರತಿ ದಿನ ಎಷ್ಟು ಆಧಾರ್ ಕಾರ್ಡ್ಗಳನ್ನು ಮಾಡಿಕೊಡುತ್ತಿರಿ ಎಂದು ಪ್ರಶ್ನಿಸಿದಾಗ ಕೇವಲ 15 ಎಂದು ಉತ್ತರಿಸಿದಾಗ ಡಿಸಿಯವರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿ ಯಾವುದೇ ತರಹದ ಗದ್ದಲವಿಲ್ಲ, ಪಕ್ಕದ ತೇರದಾಳ ಆಧಾರ್ ಕೇಂದ್ರದಲ್ಲಿ ಜನ ಸರದಿಯಲ್ಲಿ ನಿಂತಿರುತ್ತಾರೆ. ಆದ ಕಾರಣ ನಾಳೆಯಿಂದಲೇ ನೀವು ಪ್ರತಿ ದಿನ 32 ಜನರಿಗೆ ಆಧಾರ ಕಲ್ಪಿಸಿಕೊಟ್ಟು ಜಿಲ್ಲಾ ಕಚೇರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.
ಜಮಖಂಡಿ ಉಪವಿಭಾಗಾಧಿಕಾರಿ ಇಕ್ರಂ, ಯೋಜನಾ ಅಭಿವೃದ್ಧಿ ಅಧಿಕಾರಿ ವಿಜಯ ಮೆಕ್ಕಳಕಿ, ತೇರದಾಳ ವಿಶೇಷ ತಹಶೀಲ್ದಾರ್ ಮೆಹಬೂಬಿ, ರಬಕವಿ-ಬನಹಟ್ಟಿ ಗ್ರೇಡ್ 2 ತಹಶೀಲ್ದಾರ್ ಎಸ್. ಬಿ. ಕಾಂಬಳೆ, ಪೌರಾಯುಕ್ತ ಆರ್. ಎಂ. ಕೊಡಗೆ, ಡಿ. ಬಿ. ಮಾಯಣ್ಣವರ ಸೇರಿದಂತೆ ಅನೇಕರಿದ್ದರು.