ವ್ಯಾಪಾರಸ್ಥರಿಗೆ ತಹಶೀಲ್ದಾರ್ ಖಡಕ್ ವಾರ್ನಿಂಗ್
ರಸ್ತೆ ಮಧ್ಯದಲ್ಲೇ ಜನಜಂಗುಳಿ ಸೇರಿಸಿ ವ್ಯಾಪಾರ, ತಹಶೀಲ್ದಾರ್ ಶ್ವೇತಾ ಗರಂ
Team Udayavani, Jun 9, 2021, 6:45 PM IST
ಹುನಗುಂದ: ತರಕಾರಿ ಮತ್ತು ಹಣ್ಣಿನ ಮಾರಾಟಕ್ಕೆ ಟಿಸಿಎಚ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದು ಅಲ್ಲಿಯೇ ಅಂಗಡಿ ಹಚ್ಚುವಂತೆ ತಿಳಿಸಿದರೂ ಕೇಳುತ್ತಿಲ್ಲ. ಪದೇ ಪದೇ ರಸ್ತೆ ಮಧ್ಯದಲ್ಲೇ ಜನಜಂಗುಳಿ ಸೇರಿಸಿ ವ್ಯಾಪಾರ ಮಾಡುತ್ತಿದ್ದೀರಿ. ಇದು ಇನ್ನೊಂದು ಬಾರಿ ಕಂಡು ಬಂದರೆ ಮುಲಾಜಿಲ್ಲದೇ ಪ್ರಕರಣ ದಾಖಲಿಸುವುದಾಗಿ ತಹಶೀಲ್ದಾರ್ ಶ್ವೇತಾ ಬಿಡಿಕರ ವ್ಯಾಪಾರಸ್ಥರಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ರಾಯಚೂರು ಮತ್ತು ಬೆಳಗಾವಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಎಲ್ಲೆಂದರಲ್ಲಿ ತರಕಾರಿ ಮತ್ತು ಹಣ್ಣಿನ ಗಾಡಿ ಹಚ್ಚಿ ಸಾಮಾಜಿಕ ಅಂತರವಿಲ್ಲದೇ ವ್ಯಾಪಾರ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗರಂ ಆಗಿ ಖಡಕ್ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಶ್ವೇತಾ ಮತ್ತು ಪಿಎಸ್ಐ ಶರಣಬಸಪ್ಪ ಸಂಗಳದ ನೇತೃತ್ವದಲ್ಲಿ ಬಸ್ ನಿಲ್ದಾಣ, ವಿ.ಮ ಸರ್ಕಲ್ ಮುಂಭಾಗದಲ್ಲಿ ಹಚ್ಚಿದ್ದ ತರಕಾರಿ-ಹಣ್ಣಿನ ತಳ್ಳುಗಾಡಿ ಟಿಸಿಎಚ್ ಕಾಲೇಜು ಮೈದಾನಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದಾಗ ವ್ಯಾಪಾರಸ್ಥರು ಗಾಡಿ ಸಮೇತ ತೆರಳಿದರು. ನಂತರ ಇನ್ಮುಂದೆ ರಸ್ತೆ ಮೇಲೆ ಯಾರಾದರೂ ತರಕಾರಿ-ಹಣ್ಣಿನ ಗಾಡಿ ಹಚ್ಚಿದರೆ ಹುಷಾರ್..ನಾಳೆಯಿಂದ ರಸ್ತೆಯಲ್ಲಿ ಯಾರಾದರೂ ಕಂಡರೆ ಅವರ ಗಾಡಿ ವಸ್ತುಗಳ ಸಮೇತ ತೆಗೆದುಕೊಂಡು ಹೋಗಿ ಅವರ ಮೇಲೆ ಕೇಸ್ ಹಾಕುವಂತೆ ಮುಖ್ಯಾಧಿಕಾರಿ ಅಶೋಕ ಪಾಟೀಲ ಅವರಿಗೆ ಸೂಚಿಸಿದರು.