ರಾಜೀವ್ ಗಾಂಧಿ ಕೊಡುಗೆ ಅಪಾರ
Team Udayavani, May 22, 2020, 4:56 AM IST
ಬಾಗಲಕೋಟೆ: ಆಧುನಿಕ ಭಾರತ ನಿರ್ಮಾಣದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ಎಚ್.ವೈ. ಮೇಟಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಐಟಿ ಉದ್ಯಮ, ದೂರ ಸಂಪರ್ಕ ಕ್ರಾಂತಿ ಮಾಡಿದ ಖ್ಯಾತಿ ರಾಜೀವ ಗಾಂಧಿ ಅವರಿಗೆ ಸಲ್ಲುತ್ತದೆ. ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಕೈಗೊಂಡ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆಡಳಿತ ಶೈಲಿ, ಬಡ ಜನರ ಕಾಳಜಿ ನಮಗೆಲ್ಲ ಪ್ರೇರಣೆಯಂತಿವೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ದಡ್ಡಿ ಮಾತನಾಡಿ, ರಾಜೀವ ಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರನ್ನು ಭಾರತದ ಫಾದರ್ ಆಫ್ ಐಟಿ ಮತ್ತು ಟೆಲಿಕಮ್ಯುನಿಕೇಷನ್ ಕ್ರಾಂತಿ ಹರಿಕಾರ ಎಂದು ಕರೆಯಲಾಗುತ್ತದೆ ಎಂದರು.
ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆ, 18 ವಯಸ್ಸಿನವರಿಗೆ ಮತದಾನದ ಹಕ್ಕು, ನವೋದಯ ಶಾಲೆಗಳ ನಿರ್ಮಾಣ, ಕಂಪ್ಯೂಟರೀಕರಣ, ಟೆಲಿಕಮ್ಯೂನಿಕೇಷನ್ ನಲ್ಲಿ ಕ್ರಾಂತಿ ಮಾಡಿದ್ದರು. ಇಂದಿಗೂ ಅವರ ಕೊಡುಗೆಯನ್ನು ದೇಶದ ಯುವ ಜನತೆ ನೆನಪಿಸಿ ಕೊಳ್ಳುತ್ತಾರೆ. ವಿಶ್ವದಲ್ಲೇ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಪ್ರಧಾನಿಯಾಗಿದ್ದರು ಎಂದು ಹೇಳಿದರು. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಶೇಖರ ರಾಠೊಡ ಮಾತನಾಡಿ, ರಾಜೀವ್ ಗಾಂಧಿ ನವ ಭಾರತದ ನಿರ್ಮಾತೃಗಳಾಗಿದ್ದರು ಎಂದರು.
ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ ನಿರೂಪಿಸಿ, ವಂದಿಸಿದರು. ನಗರ ಬ್ಲಾಕ್ ಅಧ್ಯಕ್ಷ ಹಾಜಿಸಾಬ ದಂಡಿನ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್. ರಾಂಪುರ, ನಗರಸಭೆ ಸದಸ್ಯ ಚೆನ್ನವೀರ ಅಂಗಡಿ, ಆನಂದ ಶಿಲ್ಪಿ, ಎನ್.ಜಿ. ಕೋಟಿ, ರಂಗನಾಥ ಬಂಡಿವಡ್ಡರ ಇದ್ದರು.