ಇಜ್ಜೋಡು ಎತ್ತುಗಳ ಸರ್ಕಾರ ಶೀಘ್ರ ಪತನ
Team Udayavani, Jun 25, 2018, 6:55 AM IST
ಮುಧೋಳ: ಜೋಡಿ ಎತ್ತುಗಳು ಚೆನ್ನಾಗಿದ್ದರೆ ರೈತ ಕೃಷಿ ಕೆಲಸಗಳನ್ನು ಸರಳವಾಗಿ ಮಾಡಬಹುದು. ಇಜ್ಜೋಡು
ಎತ್ತುಗಳಾದರೆ ಒಂದು ಎತ್ತು ದಡಕ್ಕೆ ಎಳೆದರೆ ಇನ್ನೊಂದು ಎತ್ತು ಕೆರೆಗೆ ಎಳೆಯುತ್ತದೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಸ್ಥಿತಿ ಕೂಡಾ ಇದಕ್ಕಿಂತ ಭಿನ್ನವಾಗಿಲ್ಲ. ಈ ಸರ್ಕಾರ ಮುಂದಿನ ಮೂರು ತಿಂಗಳಲ್ಲಿ ಬೀಳುವುದು ಖಚಿತ. ಮತ್ತೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಶಾಸಕ ಮುರುಗೇಶ ನಿರಾಣಿ
ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಖ್ಯಾಬಲ ಒಂದರ ಆಧಾರದ ಮೇಲೆ ಸರ್ಕಾರ ನಡೆಯುತ್ತಿದೆ. ಜು.2ರಂದು ಅಧಿವೇಶನ ಆರಂಭವಾಗುತ್ತದೆ. ಅತೃಪ್ತಿ ಭುಗಿಲು ಹೆಚ್ಚಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಕ್ಷಿಪ್ರಕ್ರಾಂತಿಗೆ ವೇದಿಕೆ ನಿರ್ಮಾಣವಾಗುತ್ತದೆ ಎಂದರು.