ಅಡುಗೆ ಎಣ್ಣೆಗೆ ಕೊಟ್ಟ ಮಹತ್ವ, ಮನುಷ್ಯನ ಜೀವಕ್ಕೆ ಕೊಡಲಿಲ್ಲ!
Team Udayavani, Sep 17, 2018, 6:10 AM IST
ಇಳಕಲ್ಲ (ಬಾಗಲಕೋಟೆ ): ಅಡುಗೆ ಎಣ್ಣೆಗೆ ಕೊಟ್ಟ ಮಹತ್ವ, ಮನುಷ್ಯನ ಜೀವಕ್ಕೆ ಕೊಟ್ಟಿದ್ದರೆ, ಒಂದು ಜೀವ ಉಳಿಯುತ್ತಿತ್ತು ಏನೋ!
ಇಳಕಲ್ಲ ನಗರ ಹೊರ ವಲಯದ ಮುದಗಲ್ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 57ರ ಮೇಲೆ ಭಾನುವಾರ ಮಧ್ಯಾಹ್ನ ಕೆಟ್ಟು ನಿಂತಿದ್ದ ಅಡುಗೆ ಎಣ್ಣೆ ತುಂಬಿಕೊಂಡಿದ್ದ ಕಂಟೇನರ್ ಲಾರಿಗೆ ಹಿಂದಿನಿಂದ ಮತ್ತೂಂದು ಲಾರಿ ಬಂದು ಡಿಕ್ಕಿ ಹೊಡೆದಿತ್ತು.
ಈ ವೇಳೆ ಕಂಟೇನರ್ ಲಾರಿಯಲ್ಲಿದ್ದ ಅಡುಗೆ ಎಣ್ಣೆ ಹೆದ್ದಾರಿ ತುಂಬ ಹರಿಯುತ್ತಿತ್ತು. ಸುದ್ದಿ ತಿಳಿದ ಸುತ್ತಲಿನ ಜನರು, ಕೊಡ, ಪ್ಲಾಸ್ಟಿಕ್ ಬಾಟಲ್ಗಳೊಂದಿಗೆ ಓಡೋಡಿ ಬಂದು ಎಣ್ಣೆ ತುಂಬಿಕೊಳ್ಳಲು ಮುಗಿ ಬಿದ್ದರು. ಆ ಸಂದರ್ಭದಲ್ಲಿ ಕಂಟೇನರ್ ಲಾರಿ ಮಧ್ಯೆ ಡಿಕ್ಕಿ ಹೊಡೆದ ಲಾರಿಯ ಚಾಲಕ ಸಿಲುಕಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ. ಆದರೆ, ಅಡುಗೆ ಎಣ್ಣೆ ತುಂಬಿಕೊಳ್ಳಲು ಮುಗಿಬಿದ್ದ ಜನರು ಆ ಚಾಲಕನ ಜೀವಕ್ಕೆ ಬೆಲೆಯೇ ಕೊಡಲಿಲ್ಲ. ಸ್ಥಳಕ್ಕೆ ಬಂದ ಇನ್ನಷ್ಟು ಪ್ರಜ್ಞಾವಂತ ನಾಗರಿಕರು, ಚಾಲಕನ ಜೀವ ಉಳಿಸಲು ಪ್ರಯತ್ನಿಸಿದರು. 108 ತುರ್ತು ವಾಹನಕ್ಕೆ ಹಾಗೂ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಪೊಲೀಸರೊಂದಿಗೆ ಚಾಲಕ ತಪರಾಜ ಕೃಷ್ಣಪ್ಪ ಗಾರಿ ಎಂಬಾತನನ್ನು ಹೊರ ತೆಗೆಯಲು ಹರಸಾಹಸಪಟ್ಟರು. ಆಂಧ್ರದ ಇಂದುಪುರ ಚಾಲಕ ತಪರಾಜ ಕೃಷ್ಣಪ್ಪ ಗಾರಿ, ಅಷ್ಟೊತ್ತಿಗೆ ಮೃತಪಟ್ಟಿದ್ದ. ಜನರು ಎಣ್ಣೆ ತುಂಬಿಕೊಳ್ಳಲು ಮುಗಿ ಬೀಳುವ ಮೊದಲೇ, ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರೆ ಆತನ ಪ್ರಾಣ ಉಳಿಯುತ್ತಿತ್ತು.