ನೀರಲ್ಲಿ ಮುಳುಗಿದ ವಿಶ್ವ ಪ್ರವಾಸಿ ತಾಣಗಳು
ಶಿವಯೋಗ ಮಂದಿರ ಜಲಾವೃತ,ಐಹೊಳೆ ಜಲಾವೃತ
Team Udayavani, Aug 9, 2019, 6:13 PM IST
ಬಾಗಲಕೋಟೆ : ಮಹಾರಾಷ್ಟ್ರ, ಬೆಳಗಾವಿಯಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ಜಿಲ್ಲೆಯ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿದ ಜಿಲ್ಲೆಯ ಐತಿಹಾಸಿಕ ಪಟ್ಟದಕಲ್ಲ ಗ್ರಾಮದ ಸ್ಮಾರಕಗಳು ಮಲಪ್ರಭಾ ನದಿ ನೀರಿನಲ್ಲಿ ಮುಳುಗಿವೆ.
ಪಟ್ಟದಕಲ್ಲನಲ್ಲಿ 7 ಮತ್ತು 8ನೇ ಶತಮಾನದ ಪಾಪನಾಥ ದೇವಾಲಯ, ಕಾಡಸಿದ್ದೇಶ್ವರ, ಜಂಬುಲಿಂಗ, ಗಳಗನಾಥ, ಸಂಗಮೇಶ್ವರ, ವಿರುಪಾಕ್ಷಿ, ಮಲ್ಲಿಕಾರ್ಜುನ ಹಾಗೂ ಕಾಶಿ ವಿಶ್ವೇಶ್ವರ ಸೇರಿದಂತೆ ಒಟ್ಟು 9 ದೇವಾಲಗಳಿದ್ದು, ಎಲ್ಲವೂ ಜಲಾವೃತಗೊಂಡಿವೆ.
ಅಲ್ಲದೇ ಪಟ್ಟದಕಲ್ಲ ಗ್ರಾಮದ ಸುತ್ತ ನೀರು ಹರಿಡಿಕೊಂಡಿದ್ದು, ಗ್ರಾಮದ ಸುಮಾರು 40ಕ್ಕೂ ಹೆಚ್ಚು ಜನರು ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲ ಗ್ರಾಮದ ದೇವಸ್ಥಾನದ ಮೇಲೆ ಏರಿ ಕುಳಿತು, ರಕ್ಷಣೆಗಾಗಿ ಕಾಯುತ್ತಿದ್ದಾರೆ.
ಐಹೊಳೆಯೂ ಜಲಾವೃತ :
ಅಲ್ಲದೇ ಹುನಗುಂದ ತಾಲೂಕು ವ್ಯಾಪ್ತಿಯ ರಾಷ್ಟ್ರ ಮಟ್ಟದ ಪ್ರವಾಸಿ ತಾಣವಾದ ಐಹೊಳೆ ಕೂಡ ಜಲಾವೃತಗೊಂಡಿದೆ. ಇಲ್ಲಿನ ಚಾಲುಕ್ಯರ ಕಾಲದ ಮಾರುತೇಶ್ವರ ದೇವಾಲಯ,ಲಕ್ಷ್ಮೀ ದೇವಾಲಯ,ಕೊರವರ(ವೆನಿಯರ್)ದೇವಾಲಯ,ಅಳ್ಳಿ ಬಸಪ್ಪ ದೇವಾಲಯ, ಹುಚ್ಚಪ್ಪಯ್ಯ ದೇವಸ್ಥಾನ,ಚಕ್ರ ಗುಡಿ,ಬಡಿಗೇರ ಗುಡಿ,ಗೌಡರ ದೇವಾಲಯ ನೀರಿನಲ್ಲಿ ಮುಳುಗಿವೆ.ನದಿಯ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ನೀರು ದುರ್ಗಾ ದೇವಾಲಯ,ಅಂಬಿಗೇರ ದೇವಾಲಯ,ಲಾಡಖಾನ ದೇವಾಲಯ ಸಮೀಪಿಸಿದೆ. ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಿದರೆ, ಈ ದೇವಾಲಯಗಳೂ ನೀರಿನಲ್ಲಿ ಮುಳುಗಲಿವೆ.
ಶಿವಯೋಗ ಮಂದಿರ ನೀರಿನಲ್ಲಿ :
ದೇಶದ ಮಠಗಳಿಗೆ ವಟುಗಳನ್ನು ತಯಾರಿಸಿ ಕೊಡುವ ವಟು ಕೇಂದ್ರವೆಂದೇ ಕರೆಸಿಕೊಳ್ಳುವ ಶಿವಯೋಗ ಮಂದಿರ ಕೂಡ ನೀರಿನಲ್ಲಿ ಮುಳಿಗಿದೆ. ದೇಶದ 2ನೇ ಅತಿದೊಡ್ಡ ರಥ ಎಂಬ ಖ್ಯಾತಿ ಪಡೆದ ಇಲ್ಲಿನ ರಥ ಹಾಗೂ ರಥದ ಮನೆ ಜಲಾವೃತಗೊಂಡಿದೆ. ಇಲ್ಲಿ ದೊಡ್ಡ ಗೋ ಶಾಲೆ ಇದ್ದು, ಸುಮಾರು 7೦೦ಕ್ಕೂ ಹೆಚ್ಚು ಗೋವುಗಳು ನೀರಿನಲ್ಲಿ ನಿಂತಿವೆ.