1000 ರೂ. ಲಂಚ ಪಡೆದ ವೈದ್ಯಗೆ 1 ವರ್ಷ ಸಜೆ
Team Udayavani, Jan 19, 2017, 3:50 AM IST
ಬೆಂಗಳೂರು: ಪಾದನೋವಿನಿಂದ ನರಳುತ್ತಿದ್ದ ಯುವತಿಗೆ ಶಸ್ತ್ರಚಿಕಿತ್ಸೆ ಮಾಡಲು ಒಂದು ಸಾವಿರ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಹಿರಿಯ ಸರ್ಕಾರಿ ವೈದ್ಯರೊಬ್ಬರನ್ನು ದೋಷಿ ಎಂದು ತೀರ್ಮಾನಿಸಿದ ಹೈಕೋರ್ಟ್, ಒಂದು ವರ್ಷ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಬೆಂಗಳೂರು ಉತ್ತರ ತಾಲೂಕಿನ ನಿವಾಸಿ, ಹಿರಿಯ ಸರ್ಜನ್ ಡಾ.ಹನುಮಂತಪ್ಪ ಶಿಕ್ಷೆ ಗುರಿಯಾದ ವೈದ್ಯ. ಪ್ರಕರಣದಲ್ಲಿ ಹನುಮಂತಪ್ಪನನ್ನು ಖುಲಾಸೆಗೊಳಿಸಿ ಚಿಕ್ಕಮಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ವೈದ್ಯ ಹನುಮಂತಪ್ಪ ಲಂಚ ಸ್ವೀಕರಿಸಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಒದಗಿಸಿದ್ದಾರೆ. ಹನುಮಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವುದು ಅವರ ಕರ್ತವ್ಯ. ಆದರೆ, ಸಾರ್ವಜನಿಕರಿಂದ ಲಂಚ ಸ್ವೀಕರಿಸುವುದು ಲೋಕಾಯುಕ್ತ ಕಾಯ್ದೆ 13(1)(ಡಿ) ಅಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಪ್ರಕರಣದಲ್ಲಿ ಹನುಮಂತಪ್ಪ ತಪ್ಪಿತಸ್ಥರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಹನುಮಂತಪ್ಪನನ್ನು ಖುಲಾಸೆಗೊಳಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.