ರಾಜ್ಯದಲ್ಲಿ 2 ದಿನ ಅಧಿಕ ಮಳೆ
Team Udayavani, Oct 7, 2018, 6:15 AM IST
ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಶನಿವಾರ ವಾಯುಭಾರ ಕುಸಿತ ಉಂಟಾಗದಿದ್ದರೂ, ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವುದರಿಂದ ರಾಜ್ಯ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಎರಡು ದಿನಗಳು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದ ಅಂಡಮಾನ್ ಭಾಗದಲ್ಲಿ ಶುಕ್ರವಾರವೇ ನಿರ್ಮಾಣವಾಗಿದ್ದ ಕಡಿಮೆ ಒತ್ತಡ ಪ್ರದೇಶದಿಂದ ವಾಯುಭಾರ ಕುಸಿತ ಉಂಟಗುವ ಸಾಧ್ಯೆತೆಯಿದೆ ಎನ್ನಲಾಗಿತ್ತು. ಆದರೆ, ಶನಿವಾರ ಯಾವುದೇ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿಲ್ಲ. ಆದರೆ, ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶ ಶನಿವಾರವೂ ಮುಂದುವರಿದ ಪರಿಣಾಮ ಹೆಚ್ಚಿನ ಭಾಗಗಳಲ್ಲಿ ಮಳೆಯಾಗುತ್ತಿದೆ ಎಂದು ಇಲಾಖೆಯ ಬೆಂಗಳೂರು ಕೇಂದ್ರ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಉತ್ತರ ಒಳನಾಡಿನಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದ್ದು, ಕರಾವಳಿಯಲ್ಲಿ ಚುರುಕುಗೊಂಡಿದೆ. ಪರಿಣಾಮ ಕಾರವಳಿ ಹಾಗೂ ದಕ್ಷಿಣ ಒಳನಾಡಿನ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೊಲ್ಲೂರಿನಲ್ಲಿ 8 ಸೆಂಟಿ ಮೀಟರ್ ಮಳೆಯಾಗಿದೆ.
ಉಳಿದಂತೆ ಗೇರುಸೊಪ್ಪ, ಲಿಂಗನಮಕ್ಕಿಯಲ್ಲಿ 6, ಬಂಟ್ವಾಳ, ಹೊನ್ನಾವರ 5, ಕುಂದಾಪುರ, ಕುಮಟಾ, ಅಂಕೋಲ, ಕಾರವಾರ 4, ಮಂಗಳೂರು, ಕಾರ್ಕಳ, ಶಿರಸಿ, ಕಳಸ, ಕನಕಪುರ 3, ಮೂಡಿಬಿದರೆ, ಪಣಂಬೂರು, ಆಗುಂಬೆ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಕುದೂರು, ಕೃಷ್ಣರಾಜಸಾಗರ 2, ಧರ್ಮಸ್ಥಳ, ಪುತ್ತೂರು, ಬನವಾಸಿ, ಭಾಗಮಂಗಲ, ಮಡಿಕೇರಿ, ಚಿಕ್ಕಮಗಳೂರು, ಶ್ರವಣಬೆಳಗೋಳ, ಹಾಸನ ಸೇರಿದಂತೆ ವಿವಿಧೆಡೆ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಹಲವೆಡೆ ಗುಡುಗು ಸಹಿತ ಮಳೆಯಾಗಲಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.